Tuesday, August 26, 2025
Google search engine
HomeUncategorizedನೀತಿ ಸಂಹಿತೆ ಅಂದ್ರೆ ಏನು? ಹೇಗಿರುತ್ತೆ? : ನೀವು ತಿಳಿದುಕೊಳ್ಳಬೇಕಾದ ಸಂಗತಿ ಇಲ್ಲಿದೆ

ನೀತಿ ಸಂಹಿತೆ ಅಂದ್ರೆ ಏನು? ಹೇಗಿರುತ್ತೆ? : ನೀವು ತಿಳಿದುಕೊಳ್ಳಬೇಕಾದ ಸಂಗತಿ ಇಲ್ಲಿದೆ

ಬೆಂಗಳೂರು : ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾಗಲಿದೆ. ಮುಕ್ತ, ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆ ನಡೆಸುವ ಕಾನೂನು ಕ್ರಮವೆ ನೀತಿ ಸಂಹಿತೆ. ಇದು ರಾಜಕಾರಣಿಗಳು, ಅಧಿಕಾರಿಗಳಿಗೆ ಅನ್ವಯವಾಗಲಿದೆ. ಜನರಿಗೂ ನೀತಿ ಸಂಹಿತೆಯ ಬಿಸಿ ತಟ್ಟಲಿದೆ. ಹಾಗಾಗಿ ನೀತಿ ಸಂಹಿತೆ ಕುರಿತು ಎಲ್ಲರು ತಿಳಿಯಬೇಕಾದ ಪ್ರಮುಖ ವಿಚಾರಗಳು ಇಲ್ಲಿದೆ.

  • ಈ ಮೊದಲು ಚುನಾವಣೆ ದಿನಾಂಕ ಘೋಷಣೆಯಾಗಿ, ನಾಮಪತ್ರ ಸಲ್ಲಿಕೆಯ ದಿನಾಂಕದಿಂದ ನೀತಿ ಸಂಹಿತೆ ಜಾರಿಗೆ ಬರುತ್ತಿತ್ತು. ಈಗ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿ, ಚುನಾವಣೆ ದಿನಾಂಕ ಘೋಷಿಸುತ್ತಿದ್ದಂತೆಯೇ ನೀತಿ ಸಂಹಿತೆ ಜಾರಿಯಾಗುತ್ತದೆ. ಕರ್ನಾಟಕದಲ್ಲಿ ಈಗ ನೀತಿ ಸಂಹಿತೆ ಜಾರಿಯಾಗಿದೆ.
  • ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ರಾಜಕಾರಣಿಗಳ ಹಸ್ತಕ್ಷೇಪವಿಲ್ಲದೆ ಆಡಳಿತ ಯಂತ್ರ ಕಾರ್ಯನಿರ್ವಹಿಸಲಿದೆ. ಅಧಿಕಾರಿಗಳೆ ಎಲ್ಲವನ್ನು ನಿರ್ವಹಿಸುತ್ತಾರೆ. ಸರ್ಕಾರದ ಕೆಲಸಗಳು ಎಂದಿನಂತೆ ನಡೆಯಲಿದೆ. ಆದರೆ ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ತೊಡಗುವುದರಿಂದ ಸಾರ್ವಜನಿಕ ಸೇವೆಗಳಿಗೆ ವ್ಯತ್ಯಯವಾಗಲಿದೆ. ಇನ್ನು, ಮುಖ್ಯಮಂತ್ರಿ ಹಂಗಾಮಿಯಾಗುತ್ತಾರೆ. ತುರ್ತು ಸಂದರ್ಭ ಎದುರಾದರೆ ಮಾತ್ರ ಸಚಿವರು ಇಲಾಖೆಯ ಜವಾಬ್ದಾರಿ ನಿರ್ವಹಿಸಬಹುದು.
  • ನೀತಿ ಸಂಹಿತಿ ಜಾರಿಯಾದ ಅವಧಿಯಲ್ಲಿ ಅನುದಾನ ಬಿಡುಗಡೆ, ಯೋಜನೆಗಳ ಘೋಷಣೆ, ಶಂಕುಸ್ಥಾಪನೆ, ಗುದ್ದಲಿ ಪೂಜೆ, ಉದ್ಘಾಟನೆ, ನೇಮಕಾತಿ ಮಾಡುವಂತಿಲ್ಲ. ಇವುಗಳು ಮತದಾರರ ಮೇಲೆ ಪ್ರಭಾವ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಇವುಗಳಿಗೆ ನಿಷೇಧವಿದೆ.
  • ಸಚಿವರು ಸರ್ಕಾರಿ ಯಂತ್ರವನ್ನು ಉಪಯೋಗಿಸಲು ನಿರ್ಬಂಧವಿರಲಿದೆ. ಸರ್ಕಾರದ ವಾಹನಗಳನ್ನು ಬಳಸುವಂತಿಲ್ಲ. ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳ ನೆರವು ಕೂಡ ಪಡೆಯುವಂತಿಲ್ಲ.
  • ಸರ್ಕಾರದ ಪ್ರವಾಸಿ ಮಂದಿರ, ಕಟ್ಟಡಗಳನ್ನು ಉಪಯೋಗಿಸುವಂತಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಬಳಕೆಗೆ ಅವಕಾಶವಿರಲಿದೆ. ಆದರೆ ಅದು ಒಂದೆ ಪಕ್ಷಕ್ಕೆ ಸೀಮಿತವಾಗಿರುವಂತಿಲ್ಲ.
  • ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಮಾಧ್ಯಮಗಳಲ್ಲಿ ಸರ್ಕಾರದ ಖರ್ಚಿನಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ. ಅಲ್ಲದೆ ಸರ್ಕಾರದ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು ಸಾಧನೆಗಳನ್ನು ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಮಾಡುವಂತಿಲ್ಲ.
  • ರಾಜಕೀಯ ಸಭೆ, ಸಮಾರಂಭಗಳು ನಡೆಸಲು ಆಡಳಿತದ ಅನುಮತಿ ಕಡ್ಡಾಯ. ಸ್ಪೀಕರ್, ಮೈಕ್ ಬಳಕೆ, ಪೊಲೀಸ್ ಬಂದೋಬಸ್ತ್ ಪಡೆಯಲು ಚುನಾವಣಾ ಆಯೋಗದ ಅನುಮತಿ ಪಡೆಯಬೇಕು. ಅಲ್ಲದೆ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
  • ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಯು ಮೆರವಣಿಗೆ ನಡೆಸಲು ಅನುಮತಿ ಕಡ್ಡಾಯ. ಮೆರವಣಿಗೆ ಸಾಗುವ ಮಾರ್ಗದ ಕುರಿತು ಮುಂಚಿತವಾಗಿ ತಿಳಿಸಬೇಕು. ಆ ಮಾರ್ಗದ ಹೊರತು ಅನ್ಯ ಮಾರ್ಗ ಬಳಸಬಾರದು. ಇನ್ನು, ಮೆರವಣಿಗೆ ವೇಳೆ ಅನ್ಯ ಪಕ್ಷಗಳ ನಾಯಕರ ಪ್ರತಿಕೃತಿಯನ್ನು ಕೊಂಡೊಯ್ಯುವುದು, ಪ್ರತಿಕೃತಿ ದಹಿಸುವುದಕ್ಕೆ ನಿಷೇಧವಿದೆ.
  • ಜಾತಿ, ಧರ್ಮದ ನಿಂದನಾತ್ಮಕ ಭಾಷಣ ಮಾಡುವಂತಿಲ್ಲ. ದೇಗುಲ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಪ್ರಚಾರ ನಿಷಿದ್ಧ. ಕಾರ್ಯಕ್ರಮ, ಯೋಜನೆಗಳ ಆಧಾರದಲ್ಲಿ ವಾಗ್ದಾಳಿಗೆ ಅವಕಾಶವಿದೆ. ಅದರೆ ವೈಯಕ್ತಿಕ, ಖಾಸಗಿ ವಿಚಾರಗಳನ್ನು ಮುಂದಿಟ್ಟುಕೊಂಡು ಭಾಷಣ ಮಾಡುವಂತಿಲ್ಲ.
  • ನಾಗರಿಕರ ಶಾಂತಿಯುತ ದೈನಂದಿನ ಬದುಕಿಗೆ ಭಂಗ ಉಂಟು ಮಾಡುವಂತಿಲ್ಲ. ಯಾವುದೆ ವ್ಯಕ್ತಿಯ ಅಭಿಪ್ರಾಯ, ರಾಜಕೀಯ ಪಾಲ್ಗೊಳ್ಳುವಿಕೆ ವಿರುದ್ಧ ಆತನ ಮನೆ ಮುಂದೆ ಧರಣಿ, ಪ್ರತಿಭಟನೆ ಮಾಡುವಂತಿಲ್ಲ. ಸಾರ್ವಜನಿಕರ ಅನುಮತಿ ಇಲ್ಲದೆ ಅವರ ಮನೆ ಗೋಡೆಗಳ ಮೇಲೆ ಪಕ್ಷ, ಅಭ್ಯರ್ಥಿ ಪ್ರಚಾರದ ಪೇಂಟಿಂಗ್ ಬರೆಯುವಂತಿಲ್ಲ. ಅನುಮತಿ ಇಲ್ಲದೆ ಪಕ್ಷದ ಧ್ವಜಗಳನ್ನು ಕಟ್ಟುವಂತಿಲ್ಲ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments