Tuesday, August 26, 2025
Google search engine
HomeUncategorizedಕರ್ನಾಟಕಕ್ಕೆ ಕಾಂಗ್ರೆಸ್ ಎಸಗಿರುವ ಅನ್ಯಾಯಗಳು ಸಾಲು ಸಾಲು : ಬಿ.ವೈ ವಿಜಯೇಂದ್ರ

ಕರ್ನಾಟಕಕ್ಕೆ ಕಾಂಗ್ರೆಸ್ ಎಸಗಿರುವ ಅನ್ಯಾಯಗಳು ಸಾಲು ಸಾಲು : ಬಿ.ವೈ ವಿಜಯೇಂದ್ರ

ಶಿವಮೊಗ್ಗ : ಕರ್ನಾಟಕಕ್ಕೆ ಕಾಂಗ್ರೆಸ್ ಪಕ್ಷ ಎಸಗಿರುವ ಅನ್ಯಾಯಗಳು ಸಾಲು ಸಾಲು. ಹೇಳಲು ಇನ್ನೂ ಸಮಯವಿದೆ ಎಂದು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಕುಟುಕಿದ್ದಾರೆ.

ಕರ್ನಾಟಕ ಸಂಭ್ರಮ-50 ಹಿನ್ನೆಲೆಯಲ್ಲಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಕನ್ನಡ ಅಂಕಿಗಳಿಗೆ ನಿಮ್ಮ ಸರ್ಕಾರ ತಿಲಾಂಜಲಿ ನೀಡಿದ್ದು ಯಾವಾಗ? ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಕೆಲವು ನೆನಪುಗಳು ಹಾಗೂ ಪ್ರಶ್ನೆಗಳನ್ನು ಕೇಳಿದ್ದಾರೆ.

ಕನ್ನಡ, ಕನ್ನಡಿಗ, ಕರ್ನಾಟಕದ ಬಗ್ಗೆ ದಿಢೀರ್ ಕಾಳಜಿ ಪ್ರದರ್ಶಿಸುತ್ತ ಕೇಂದ್ರ ಸರ್ಕಾರಕ್ಕೆ ಸರಣಿ ಪ್ರಶ್ನೆ ಮಾಡುತ್ತಿರುವ ನೀವು 80ರ ದಶಕದ ಐತಿಹಾಸಿಕ ಗೋಕಾಕ್ ಚಳವಳಿಯ ಹುಟ್ಟಿಗೆ ಕಾರಣರಾದವರಾರು ಎಂಬುದನ್ನು ಮರೆತಂತಿದೆ. ಭಾಷೆಯ ಅಸ್ತಿತ್ವಕ್ಕೆ ಕೊಡಲಿ ಹಾಕಲು ಹೊರಟಿದ್ದ ಅಂದಿನ ಕಾಂಗ್ರೆಸ್ ಸರ್ಕಾರ, ಗೋಕಾಕ್ ವರದಿಯನ್ನು ಮೂಲೆಗೆ ಸರಿಸಲು ಹೊರಟಾಗ ಇಂದಿರಾ ಓಲೈಕೆಯ ಕಾಂಗ್ರೆಸ್ಸಿಗರು ಏನು ಮಾಡುತ್ತಿದ್ದರು? ಎಂದು ಕುಟುಕಿದ್ದಾರೆ.

ಗೋಕಾಕ್ ವರದಿ ಅನುಷ್ಠಾನಕ್ಕಾಗಿ ಕುವೆಂಪು ಅವರು ದನಿ ಎತ್ತಿದರು, ಡಾ. ರಾಜಕುಮಾರ್ ಅವರ ನೇತೃತ್ವದಲ್ಲಿ ಸಾಹಿತಿಗಳು, ಕಲಾವಿದರು ಬೀದಿಗಿಳಿದರು. ಲಕ್ಷಾಂತರ ಕನ್ನಡಿಗರ ಆಕ್ರೋಶ ಮುಗಿಲು ಮುಟ್ಟಿತ್ತು. ಇಂಥಾ ಕನ್ನಡ ವಿರೋಧಿ ಪರಿಸ್ಥಿತಿ ನಿರ್ಮಿಸಿದ ಕುಖ್ಯಾತಿ ಯಾರಿಗೆ ಸಲ್ಲಬೇಕು? ಅಂದು ಹೋರಾಟಗಾರರ ಮೇಲೆ ಲಾಟಿ ಬೀಸಿದ್ದು, ಜೈಲಿಗೆ ತಳ್ಳಿದ್ದು, ಗುಂಡು ಹಾರಿಸಿದ್ದು ಅಮಾಯಕರ ಪ್ರಾಣ ತೆಗೆದದ್ದು ಇದಕ್ಕೆ ಉತ್ತರವೆಂಬಂತೆ 83ರ ಚುನಾವಣೆಯಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕಿದ್ದು, ಬಿಜೆಪಿಗೆ ಕನ್ನಡ ಜನತೆ ಹೃದಯದ ಬಾಗಿಲು ತೆರೆದು ಕೊಟ್ಟಿದ್ದು ಇತಿಹಾಸ. ಇದು ಮರೆಯಲು ಹೇಗೆ ಸಾಧ್ಯ? ಎಂದು ವಾಗ್ದಾಳಿ ನಡೆಸಿದ್ದಾರೆ.

ಇತಿಹಾಸ ಕನ್ನಡಿಗರು ಮರೆಯಲಾದೀತೆ?

ಸುಮಾರು ಆರು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ‘ಕರ್ನಾಟಕದ ರೈಲ್ವೆ’ಯನ್ನು ಮದರಾಸಿನ ಕೈಗೆ ಕೊಟ್ಟು ಕನ್ನಡಿಗರ ಉದ್ಯೋಗಾವಕಾಶ ಕಸಿದು ಅನ್ಯ ರಾಜ್ಯದವರ ಪಾಲಾಗಿಸುತ್ತಿದ್ದ ಇತಿಹಾಸ ಕನ್ನಡಿಗರು ಮರೆಯಲಾದೀತೆ? ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಎಂದು ಹೆಸರು ಬದಲಿಸಲು ಹಾಗೂ ಆ ಭಾಗದಲ್ಲಿ ಅಭಿವೃದ್ಧಿಯ ಕ್ರಾಂತಿಯಾಗಲು ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಬೇಕಾದ ಸಂದರ್ಭ ನೀವು ಮರೆತದ್ದಾದರೂ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments