Thursday, August 21, 2025
Google search engine
HomeUncategorizedಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವಮಾನವ ದಿನಾಚರಣೆ!

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವಮಾನವ ದಿನಾಚರಣೆ!

ದೊಡ್ಡಬಳ್ಳಾಪುರ : ಕುವೆಂಪುರವರು ಸಾಮಾಜಿಕ ಸಮಾನತೆಯನ್ನು ತಮ್ಮ ಸಾಹಿತ್ಯ, ವೈಚಾರಿಕತೆ ಹಾಗೂ ಚಿಂತನೆಗಳ ಮೂಲಕ ಹರಡಿದ್ದಾರೆ ಎಂದು ಎಂದು ಸಮಾಜವಾದಿ ಚಿಂತಕರು ಹಾಗೂ ಹೈಕೋರ್ಟಿನ ವಕೀಲರಾದ ಜಿ.ಟಿ.ನರೇಂದ್ರಕುಮಾರ್ ತಿಳಿಸಿದರು.

ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ಕಡಿಮೆ ಮಾಡಬೇಕು ಎಂಬುದನ್ನು ಕುವೆಂಪುರವರ ಸಾಹಿತ್ಯ ಮತ್ತು ವೈಚಾರಿಕತೆ ಬರಹಗಳು ತಿಳಿಸುತ್ತವೆ. ಕುವೆಂಪುವರ ಚಿಂತನೆಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಮೂಲಕ ಪುರೋಹಿತರನ್ನು ಅವಲಂಬಿಸದೆ, ಜ್ಞಾನವಂತರಾಗಿ ಸರ್ವೋದಯದತ್ತ ಮುಖ ಮಾಡಬೇಕು ಎಂದರು.

ಇದನ್ನೂ ಓದಿ: ರಾಮನ ವಿಗ್ರಹ ಪ್ರತಿಷ್ಠಾಪನೆಗೆ 84 ಸೆಕೆಂಡ್​ಗಳ ಶುಭಸಮಯ ನಿಗದಿ!

ಜಾತಿ ಮತ್ತು ಪುರೋಹಿತಶಾಹಿ ವಂಚನೆಯನ್ನು ಅರಿಯಲು ನಿರಂಕುಶಮತಿಗಳಾಗಬೇಕೆಂದು ಕುವೆಂಪು ಹೇಳಿದರು. ಕುವೆಂಪುರವರ ಶೂದ್ರತಪಸ್ವಿ, ಜಲಗಾರ ಹಾಗೂ ಬೆರಳ್ಗೆ ಕೊರಳ್ ನಾಟಕಗಳು ಸಮಾಜದ ಮೌಢ್ಯ ಹಾಗೂ ಅವಿವೇಕವನ್ನು ಕುರಿತು ಹೇಳುವುದರ ಜೊತೆಗೆ ಸಮಾಜದಲ್ಲಿ ವಿಚಾರಶಕ್ತಿಯನ್ನು ಉದ್ಧೀಪಿಸುತ್ತವೆ. ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ನಾವು ಧರ್ಮಗಳ ಆಚೆಗೂ ಬದುಕುವ ಚೈತನ್ಯವನ್ನು ಹೊಂದಬೇಕಾಗುತ್ತದೆ. ಇಂದಿನ ವರದಕ್ಷಿಣೆ ಹಾಗೂ ಆಡಂಬರದ ಮದುವೆಯ ಅನಿಷ್ಠಗಳನ್ನು ಮೀರಿ ಮಂತ್ರಮಾಂಗಲ್ಯದಂತಹ ಸರಳ ಹಾಗೂ ವೈಚಾರಿಕ ಜೀವನ ದೃಷ್ಟಿಯ ದೀಕ್ಷೆಯತ್ತ ಯುವಜನ ಆಕರ್ಷಿತರಾಗಬೇಕಾಗುತ್ತದೆ. ಕುವೆಂಪು ವಿಚಾರಧಾರೆಗಳನ್ನು ಇಂದಿನ ಯುವಕರ ಅರಿಯುವುದರಿಂದ ಸಮಾಜ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದರು.

ಕವಿ ಮತ್ತು ಚಿಂತಕ ಡಾ.ಪ್ರಕಾಶ್ ಮಂಟೇದ ಮಾತನಾಡಿ, , ಕುವೆಂಪು ಈ ನಾಡು ಹಾಗೂ ನಮ್ಮ ಬದುಕಿನ ಅದಮ್ಯ ಚೇತನ. ವಿದ್ಯಾರ್ಥಿಗಳು ಆತ್ಮಶ್ರೀಗಳಾಗಲು ಇಂತಹ ಮಾನವತವಾದಿ ಲೇಖಕರನ್ನು ಓದುತ್ತ ತಮ್ಮ ಚೈತನ್ಯವನ್ನು ಉದ್ಧೀಪನಗೊಳಿಸಿಕೊಳ್ಳಬೇಕು. ಅಲ್ಲದೆ, ಯುವ ಸಮುದಾಯ ಕುವೆಂಪು ಓದಿನ ಮೂಲಕ ಎಲ್ಲ ಜನರನ್ನು ಪ್ರೀತಿಸುವ ಸಮಾಜವಾದಿ ಚೇತನವಾಗಿ ಹೊರಹೊಮ್ಮಬೇಕೆಂದು ಎಂದರು.

ಇದನ್ನೂ ಓದಿ: ಲಾಕ್​ ಆಗಿದ್ದ ಮಂತ್ರಿ ಮಾಲ್ ಓಪನ್: ಕೋರ್ಟ್ ಅನುಮತಿ!

ಪ್ರಾಂಶುಪಾಲ ಡಾ.ಸದಾಶಿವ ರಾಮಚಂದ್ರಗೌಡ ಮಾತನಾಡಿ, ಕುವೆಂಪುರವರನ್ನು ಒಂದು ಜಾತಿ ಮತ್ತು ವೈಚಾರಿಕ ದೃಷ್ಟಿಕೋನಕ್ಕೆ ಕಟ್ಟಿಹಾಕದೆ ಮುಕ್ತ ಮನಸ್ಸಿನಿಂದ ಓದಿ ತಮ್ಮ ಜ್ಞಾನವನ್ನು ವಿಕಸನ ಮಾಡಿಕೊಳ್ಳಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಪ್ರೊ.ಉಮೇಶ್, ಪ್ರೊ. ಸತೀಶ್ , ಡಾ. ಬಿ.ಆರ್ ಗಂಗಾಧರಯ್ಯ, ಕವಿ ಚಿನ್ನುಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ. ಉದಯರಾಧ್ಯ, ಫಷೀರ್, ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕುವೆಂಪುರವರ ವಿಶ್ವಮಾನವತೆ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೂ ಬಹುಮಾನ ವಿತರಣೆ ನಡೆಯಿತು. ಪ್ರಬಂಧ ಸ್ಪರ್ಧೆಯಲ್ಲಿ ಆಶಾ ಪ್ರಥಮ ಸ್ಥಾನ, ತೃತೀಯ ಬಿ.ಎ. , ಮೀನ ದ್ವಿತೀಯ ಸ್ಥಾನ ಬಿ.ಎ. ಮಹಿಳಾ ಕಾಲೇಜು, ಹಾಗೂ ಭವ್ಯ ತೃತೀಯ ಬಿ.ಎ ಪಡೆದರು. ಕಾರ್ಯಕ್ರಮವನ್ನು ರಂಗಮನೆಯ ಹೇಮಂತ್ ಕುಮಾರ್ ನಿರೂಪಿಸದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments