Friday, August 29, 2025
HomeUncategorizedರಾಜ್ಯದಲ್ಲಿ ಮತ್ತೆ ಹಲಾಲ್ ಮಾರ್ಕ್ ಸಂಘರ್ಷ

ರಾಜ್ಯದಲ್ಲಿ ಮತ್ತೆ ಹಲಾಲ್ ಮಾರ್ಕ್ ಸಂಘರ್ಷ

ಬೆಂಗಳೂರು : ಹಿಜಾಬ್, ಅಜಾನ್, ಜಟ್ಕಾ ಕಟ್ ಸೇರಿದಂತೆ ರಾಜ್ಯದಲ್ಲಿ ಭುಗಿಲೆದ್ದಿರುವ ಧರ್ಮ ದಂಗಲ್ ಕಿಡಿಗೆ ಈಗ ಮತ್ತೊಂದು ವಿಚಾರ ಸೇರ್ಪಡೆಗೊಂಡಿದೆ. ಇಸ್ಲಾಂ ಧರ್ಮೀಯರ ಮಾಂಸಕ್ಕೆ ಮಾತ್ರ ಸೀಮಿತವಾಗಿದ್ದ ಹಲಾಲ್ ಈಗ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಪ್ರಭಾವ ಬೀರುತ್ತಿದೆ. ಇದಕ್ಕೆ ಕಾರಣವಾಗಿರುವುದು ಸಣ್ಣ, ಸಣ್ಣ ಆಹಾರ ಸಾಮಗ್ರಿಗಳಿಂದಿಡಿದು, ದೊಡ್ಡ ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ ವಸ್ತಗಳಿಗೂ ಸಹ ಹಲಾಲ್ ಮಾರ್ಕ್ ಕಾಣಿಸುತ್ತಿದೆ. ಇದು ಕೇವಲ ಮುಸ್ಲಿಂ ವ್ಯಾಪಾರಿಗಳಿಗೆ ಮಾತ್ರವಲ್ಲ, ಹಿಂದೂ ವ್ಯಾಪಾರಿಗಳಿಗೂ ವ್ಯಾಪಿಸಿದೆ. ಇದರಿಂದಾಗಿ ಕೆಂಡಾಮಂಡಲರಾಗಿರುವ ಹಿಂದೂಪರ ಸಂಘಟನೆಗಳು ಈಗ ಇದರ ವಿರುದ್ಧ ಧ್ವನಿ ಎತ್ತಲು ಮುಂದಾಗಿವೆ. ಇದಕ್ಕೆ ಮುನ್ನುಡಿ ಎಂಬುವಂತೆ ದೀಪಾವಳಿ ಹಬ್ಬ ಟಾರ್ಗೆಟ್ ಆಗಿದ್ದು, ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಕರೆ ನೀಡಲಾಗಿದೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗೊಷ್ಠಿ ನಡೆಸಿದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಹಲಾಲ್ ಮುಕ್ತ ದೀಪಾವಳಿಗೆ ಕರೆ ನೀಡಿದ್ದಾರೆ. ಈ ಬಾರಿಯ ದೀಪಾವಳಿ ಹಬ್ಬ ಶಾಪಿಂಗ್‌ನಲ್ಲಿ ಸಂಪೂರ್ಣವಾಗಿ ಮುಸ್ಲಿಂ ವ್ಯಾಪಾರಿಗಳನ್ನು ಬಾಯ್ಕಾಟ್ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ. ಹಲಾಲ್ ಕಟ್ ಎನ್ನುವುದು ಮುಸ್ಲಿಂ ಧರ್ಮದ ಮಾಂಸಕ್ಕೆ ಮಾರಾಟ ಮಾತ್ರ ಸೀಮಿತವಾಗಿತ್ತು. ಈಗ ಅದನ್ನು ಎಲ್ಲಾ ಸಾಮಗ್ರಿಗಳ ಮೇಲೆ ಬಳಸಲಾಗುತ್ತಿದೆ. ಮುಸ್ಲಿಂ ಅವರು ಹಲಾಲ್ ಮಾರ್ಕ್ ಇಲ್ಲದ ವಸ್ತುಗಳನ್ನು ಖರೀದಿಸುತ್ತಿಲ್ಲ ಅಂದಮೇಲೆ ನಾವು ಹಲಾಲ್ ವಸ್ತುಗಳನ್ನು ‌ಯಾಕೆ ಖರೀದಿ ಮಾಡಬೇಕು.. ಹೀಗಾಗಿ ಈ ಬಾರಿಯ ದೀಪಾವಳಿಗೆ ಯಾವುದೇ ಮುಸ್ಲಿಂ ವ್ಯಾಪಾರಿಗಳಿಂದ ವಸ್ತು ಖರೀದಿ ಮಾಡೋದು ಬೇಡ. ನಾವು ಮುಸ್ಲಿಮರಿಂದ ಖರೀದಿಸಿದ ವಸ್ತುಗಳಿಂದ ಪೂಜೆ ಮಾಡಿದ್ರೆ ಅಶಾಸ್ತ್ರವಾಗುತ್ತೆ. ಹಲಾಲ್ ಮಾರ್ಕ್ ಹಣದಿಂದ ರಾಕ್ಷಸರು, ದೇಶದ್ರೋಹಿಗಳು ಹುಟ್ಟಿಕೊಳ್ಳುತ್ತಿದ್ದಾರೆ ಅಂತ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.

ಇನ್ನೂ ಉತ್ಪನ್ನಗಳ ಮೇಲೆ ಹಲಾಲ್ ಮಾರ್ಕ್ ಬಳಸುತ್ತಿರುವುದು ಕಾನೂನು ಬಾಹಿರವಾಗಿದೆ. ಕೇಂದ್ರ ಸರ್ಕಾರ ಆಹಾರ ಸಾಮಗ್ರಿಗಳ ಮೇಲೆ ISO ಮಾರ್ಕ್ ನೀಡುತ್ತಿದೆ. ಇದನ್ನು ಹೊರತುಪಡಿಸಿ ಈಗ ಹಲಾಲ್ ಮಾರ್ಕ್ ಯಾಕೆ ಬಳಸಲಾಗುತ್ತಿದೆ. ಇದರಿಂದ ಬೇರೆಯೆ ದುರುದ್ದೇಶವಿದೆ. ಈ ಹಲಾಲ್ ಮಾರ್ಕ್ ನನ್ನು ಭಯೋತ್ಪಾದನೆಗೆ ಕುಮಕ್ಕು ನೀಡುವ ಸಂಸ್ಥೆ ನೀಡುತ್ತಿದೆ‌. ಇದರಿಂದ ಬಂದ ಹಣವನ್ನು ದೇಶವಿರೋಧಿ ಚಟುವಟಿಕೆಗಳಲ್ಲಿ ಬಳಸಲಾಗುತ್ತಿದೆ‌‌. ಅಲ್ಲದೆ ಇತ್ತೀಚೆಗೆ ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಲ್ಲಿ, ಔಷಧಿ, ಆಹಾರ ಉತ್ಪನ್ನ, ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಈ ಹಲಾಲ್ ಮಾರ್ಕ್ ಬಳಸಲಾಗುತ್ತಿದೆ. ಇದರಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಭಾರಿ ಪರಿಣಾಮ ಬೀರುತ್ತಿದೆ. ಹೀಗಾಗಿ ಇದನ್ನು ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲಾಲ್ ಜಿಹಾದ್ ಎಂಬ ಪುಸ್ತಕವನ್ನು ಹಿಂದೂ ಜಾಗೃತಿ ಸಮಿತಿಯ ಸದಸ್ಯ ರಮೇಶ್ ಎಂಬುವವರು ಬರೆದಿದ್ದಾರೆ ಎಂದು ಹಿಂದೂ ಜಾಗೃತಿ ಸಮಿತಿಯವರು ಹೇಳಿದ್ದಾರೆ.

ಇನ್ನೂ ಈ ಹಲಾಲ್ ಮಾರ್ಕ್ ಬಗ್ಗೆ ಜಾಗೃತಿ ಮೂಡಿಸಲು ಹಿಂದೂ ಸಂಘಟನೆಗಳು ವಿವಿಧ ರೀತಿಯ ಅಭಿಯಾನ ಆರಂಭಿಸಿದ್ದು, ಬೆಂಗಳೂರಿನಲ್ಲಿ ಈ ಬಗ್ಗೆ ಸಮಾವೇಶ ನಡೆಸಲು ಸಹ ತೀರ್ಮಾನಿಸಲಾಗಿದೆ.ಈ ಅಭಿಯಾನಕ್ಕೆ ಯಾವ ರೀತಿಯಲ್ಲಿ ಜನಮನ್ನಣೆ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಮಲ್ಲಿಕ್ ಬೆಳಗಲಿ ಪವರ್ ಟಿವಿ ಹುಬ್ಬಳ್ಳಿ

RELATED ARTICLES
- Advertisment -
Google search engine

Most Popular

Recent Comments