ಬೆಂಗಳೂರು : ‘ನನಗೆ ಅವಿರೋಧ ಆಯ್ಕೆ ಬೇಡ..ನನಗೆ ಕುಸ್ತಿ ಬೇಕು..ಕಣಕ್ಕೆ ಯಾರ್ ಬರ್ತಿರೋ ಬನ್ನಿ..
ಇದು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲ್ ಹಾಕಿದ ಪರಿ. ಶಿಗ್ಗಾವಿ ಅಖಾಡಕ್ಕೆ ಬರುವಂತೆ ಬಹಿರಂಗ ಪಂತಾಹ್ವಾನ ನೀಡಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಕ್ಷೇತ್ರಗಳಲ್ಲಿ ಆಹ್ವಾನ ಇದ್ದರೂ ನನಗೆ ಪ್ರೀತಿ-ವಿಶ್ವಾಸ, ದುಡಿಮೆ ಇರೋ ಕಡೆ ಅಂದರೆ ಇಲ್ಲಿ ಶಿಗ್ಗಾವಿಯಲ್ಲಿ ಪರೀಕ್ಷೆಗೆ ಇಳಿಯುತ್ತೇನೆ. ನನ್ನ ಸ್ಪರ್ಧೆ ಶಿಗ್ಗಾವಿ ಕ್ಷೇತ್ರದಲ್ಲೇ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.
ಈ ಹಿಂದೆ ಶಿಗ್ಗಾವಿ ಕ್ಷೇತ್ರದಲ್ಲಿ ಬಹಳಷ್ಟು ಅಪಪ್ರಚಾರ ನಡೆಯುತ್ತಿತ್ತು. ವಿರೋಧಿಗಳ ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಕ್ಷೇತ್ರದ ಜನರ ಮೇಲೆ ವಿಶ್ವಾಸವಿದೆ. ಕ್ಷೇತ್ರದ ಜನರು ಆಶೀರ್ವಾದದಿಂದ ರಾಜ್ಯದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನೀರಾವರಿ ಯೋಜನೆ ನನ್ನ ಅಧಿಕಾರಾವಧಿಯಲ್ಲಿ ಮಾಡಿ, ನಾನೇ ಉದ್ಘಾಟನೆ ಕೆಲಸ ಮುಗಿಸಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಡಿ.ಕೆ ಶಿವಕುಮಾರ್ ‘ಅದೊಂದು ಹುಚ್ಚಮುಂಡೆದು’
ಈ ಸನ್ಮಾನ ನನಗಲ್ಲ, ನಿಮಗೆ ಸಲ್ಲಬೇಕು
ನನಗೆ ಈ ಕ್ಷೇತ್ರ ಮತ್ತು ಸಮಸ್ತ ಕರ್ನಾಟಕದ ಸೇವೆ ಮಾಡುವ ಅವಕಾಶ ದೊರೆಯಲು ಕಾರಣ ಈ ಕ್ಷೇತ್ರದ ಜನತೆಯ ಆಶೀರ್ವಾದ. ನಾನು ನೀರಾವರಿ ಸಚಿವನಾಗಿ 7 ಲಕ್ಷ ಎಕರೆಗಿಂತ ಹೆಚ್ಚು ಕೃಷಿಭೂಮಿಗೆ ನೀರಾವರಿ ಒದಗಿಸಿರುತ್ತೇನೆ. ಇದೊಂದು ದಾಖಲೆ ಆಗಿದ್ದು ಈ ಸಾಧನೆಯ ಶ್ರೇಯಸ್ಸು ಇಲ್ಲಿನ ಜನತೆಗೆ ಸಲ್ಲುತ್ತದೆ. ನಾನೇ ಪ್ರಾರಂಭ ಮಾಡಿದ ಯೋಜನೆಗಳನ್ನು ನಾನೇ ಉದ್ಘಾಟಿಸಿದ್ದೇನೆ. ಇಂಥದ್ದೇ ಸಂದರ್ಭದಲ್ಲಿ ತುಮಕೂರಿನಲ್ಲಿ ನನ್ನನ್ನು ಸನ್ಮಾನಿಸಿದಾಗ, ಈ ಸನ್ಮಾನ ನನಗಲ್ಲ, ನಿಮಗೆ ಸಲ್ಲಬೇಕು ಎಂದಿದ್ದೆ ಅಂತಾ ಹೇಳಿದ್ದಾರೆ.
ಪುನಃ ಹೇಳುತ್ತೇನೆ.. ಇದೊಂದು ಐತಿಹಾಸಿಕ ದಿನ. ಶಿಗ್ಗಾವಿ-ಸವಣೂರು ತಾಲ್ಲೂಕಿನ ಪ್ರತಿಯೊಂದು ಹಳ್ಳಿಯಲ್ಲಿ ಹಿರಿಯರು, ಹೊಸ ಯುವಕ ಯುವತಿಯರು, ಪಕ್ಷವನ್ನು ಸೇರುವ ಇಚ್ಛೆ ವ್ಯಕ್ತಪಡಿಸಿ ಸಂದೇಶ ಕಳಿಸಿದ್ದಾರೆ. ಎಲ್ಲರೂ ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ. ನಾನು ಆಯಾ ಗ್ರಾಮಗಳಿಗೆ ಭೇಟಿ ನೀಡಿದಾಗ ಅವರನ್ನು ಅಭಿನಂದಿಸಲಿದ್ದೇನೆ. ಇದು ಹೊಸ ಮನ್ವಂತರದ ಪ್ರಾರಂಭ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



