ಬೆಂಗಳೂರು: ಕುಮಾರಸ್ವಾಮಿ ಹುಚ್ಚರಾಗಿದ್ದು, ತಾಳ್ಮೆ ಕಳೆದುಕೊಂಡಿದ್ದಾರೆ ಎಂದು DCM DK ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ಬ್ಲ್ಯಾಕ್ಮೇಲ್ಗಳಿಗೆ, ಪೊಗರು ಮಾತುಗಳಿಗೆ ನಾನು ಹೆದರಲ್ಲ ಎಂದಿದ್ದಾರೆ. ನಾನು ಭಯಪಡಲ್ಲ ಎಂಬ ವಿಚಾರ ಅವರಿಗೂ ಗೊತ್ತಿದೆ. HDK ಕೇಳಿರುವ ಎಲ್ಲಾ ದಾಖಲೆಗಳನ್ನು ಕೊಡಲು ಸಿದ್ಧ ಎಂದು ಡಿಕೆಶಿ ಹೇಳಿದ್ದಾರೆ.
ಲುಲು ಮಾಲ್ಗೆ 24 ಎಕರೆ ಖರಾಬು ಭೂಮಿಯನ್ನು ಡಿಕೆಶಿ ಕಬಳಿಸಿದ್ದಾರೆ ಎಂಬ ಮಾಜಿ CM HDK ಆರೋಪಕ್ಕೆ ಡಿಕೆಶಿ ತಿರುಗೇಟು ನೀಡಿದ್ದಾರೆ.
“ಕುಮಾರಸ್ವಾಮಿ ಹುಚ್ಚರಾಗಿದ್ದಾರೆ. ಅವರು ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ. ಹತಾಶೆಯಲ್ಲಿ ಅವರು ಬಾಯಿಗೆ ಬಂದದ್ದು ಮಾತನಾಡುತ್ತಿದ್ದಾರೆ. ಅವರು ಏನೇನು ಕೇಳುತ್ತಾರೆ, ಅವರ ಆಚಾರ ವಿಚಾರ, ಮಾತುಗಳಿಗೆ ರಾಜ್ಯದ ಜನ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಇನ್ನು ಬೇಕಾದರೆ ಆ ಉತ್ತರವನ್ನು ನಾನು ಕೊಡುತ್ತೇನೆ. ಅವರು ಕೇಳುತ್ತಿರುವ ಲೆಕ್ಕಾಚಾರದ ಪಟ್ಟಿ ಕೊಡೋಣ” ಎಂದು ತಿಳಿಸಿದರು.
ನಿಮ್ಮ ಮಾಲ್ ಅನ್ನು ಖರಾಬು ಭೂಮಿಯಲ್ಲಿ ಕಟ್ಟಿದ್ದೀರಿ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ನಾನು ಮಾಲ್ ಕಟ್ಟಿರುವ ಜಾಗ ಕೇಂದ್ರ ಸರ್ಕಾರದ ಒಂದು ಸಂಸ್ಥೆಗೆ ಸೇರಿದ್ದು. ಆ ಸಂಸ್ಥೆಯವರು ದಾಖಲೆ ಮುಂದಿಟ್ಟು ಟೆಂಡರ್ ಕರೆದಿದ್ದರು. ಅದನ್ನು ನಮ್ಮ ಸ್ನೇಹಿತರು ಖರೀದಿ ಮಾಡಿದ್ದರು. ಅವರಿಂದ ನಾನು ಖರೀದಿ ಮಾಡಿ ಜಂಟಿ ಸಹಯೋಗದಲ್ಲಿ ಮಾಲ್ ಕಟ್ಟಿದ್ದೇವೆ. ಅದರಲ್ಲಿ ಏನಾದರೂ ತಪ್ಪಿದ್ದರೆ ನನ್ನನ್ನು ಗಲ್ಲಿಗೆ ಹಾಕಲಿ. ಯಾವುದೇ ರೀತಿಯ ತನಿಖೆ ಮಾಡಿಸಲಿ. ನಾನು ಎಲ್ಲದಕ್ಕೂ ಸಿದ್ಧ” ಎಂದರು.