ಶಿವಮೊಗ್ಗ : ಚುನಾವಣೆ ಅಂದ ಮೇಲೆ ಕಾಂಗ್ರೆಸ್ ಬದುಕಿರಬೇಕಲ್ಲವೇ, ನಮಗೆ ವಿರೋಧ ಪಕ್ಷವೇ ಇಲ್ಲ ಅಂದರೆ ಗತಿಯೇನು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕೆಲ ಸೀಟ್ ಗೆಲ್ಲುವುದಕ್ಕೆ ಅವಕಾಶ ನೀಡಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಎಲ್ಲಿ ಬಿಜೆಪಿಗೆ ವ್ಯತ್ಯಾಸವಾಗಿದೆ ಅಲ್ಲಿ ಸರಿಪಡಿಸುತ್ತೇವೆ ಎಂದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಇನ್ನು, ದೇವಸ್ಥಾನಗಳಿಗೆ ಸ್ವತಂತ್ರ ಕೊಟ್ಟರೆ ಕಾಂಗ್ರೆಸ್ನವರಿಗೆ ಏಕೆ ಉರಿ? ಇಲ್ಲಿಯವರೆಗೆ ಚರ್ಚ್ಗಳಿಗೆ, ಮಸೀದಿಗಳಿಗೆ ಸ್ವಾತಂತ್ರ್ಯ ಇದೆ. ದೇವಸ್ಥಾನಗಳಿಗೆ ಸ್ವಾತಂತ್ರ್ಯ ಕೊಟ್ಟ ತಕ್ಷಣ ಡಿ.ಕೆ. ಶಿವಕುಮಾರ್ ಏಕೆ ಬೇಸರ ಮಾಡಿಕೊಂಡರು ನನಗೆ ಗೊತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.


