ದಾವಣಗೆರೆ: ಗ್ರಾಮದಲ್ಲಿ ರುದ್ರಭೂಮಿ ಇಲ್ಲ ಎಂಬ ಕಾರಣಕ್ಕೆ ಶವವನ್ನು ಗ್ರಾಮ ಪಂಚಾಯತಿ ಮುಂಭಾಗ ಇಟ್ಟು ಪ್ರತಿಭಟನೆ ಮಾಡಿದಂತ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಕುಮಾರ್ ಎಂಬುವರು ಇಂದು ಮೃತಪಟ್ಟಿದ್ದರು. ಈ ವೇಳೆ ಹೂಳಲು ಜಾಗವಿಲ್ಲದೇ ಇದ್ದಿದ್ದಕ್ಕೆ ಗ್ರಾಮ ಪಂಚಾಯತಿ ಮುಂಭಾಗ ಇಟ್ಟು ಪ್ರತಿಭಟನೆ ಮಾಡಿ, ಅಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವಾರು ವರ್ಷಗಳಿಂದ ಬಸವನಹಳ್ಳಿ ಗ್ರಾಮದಲ್ಲಿ ರುದ್ರಭೂಮಿಗೆ ಜಾಗ ಕೊಡಿ ಎಂದು ಗ್ರಾಮಸ್ಥರು ಕೇಳಿಕೊಂಡಿದ್ದರು, ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿದ್ದರು, ಈ ಹಿಂದೆಯು ಕೂಡ ಗ್ರಾಮದಲ್ಲಿ ಯಾರಾದರು ಮೃತಪಟ್ಟಾಗಲೆಲ್ಲ, ರುದ್ರಭೂಮಿ ಸಮಸ್ಯೆ ಉಂಟಾಗುತ್ತಿತ್ತು.
ಇಂದು ಕೂಡ ಕುಮಾರ್ ಎಂಬುವವರು ಮೃತಪಟ್ಟಿದ್ದರಿಂದ ಶವ ಹೂಳಲು ಜಾಗವಿಲ್ಲದೇ ಗ್ರಾಮ ಪಂಚಾಯತಿ ಮುಂಭಾಗ ಶವವಿಟ್ಟು ಪ್ರತಿಭಟನೆ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದು ಕೂತಿದ್ದರು. ಈ ವೇಳೆ ಸ್ಥಳಕ್ಕೆ ನ್ಯಾಮತಿ ತಹಶೀಲ್ದಾರ್ ಹಾಗೂ ಇಓ ಭೇಟಿ ನೀಡಿ ಮನ ವಲಿಸಲು ಮುಂದಾದರು, ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಸಮಸ್ಯೆ ಬಗೆ ಹರಿಸುವಂತೆ ಹಠ ಹಿಡಿದಿದ್ದಾರೆ. ಇನ್ನೂ ಚುನಾವಣೆ ಕೌಂಟಿಗ್ ಆದ ನಂತರದಲ್ಲಿ ರುದ್ರಭೂಮಿ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಂಡು ರುದ್ರಭೂಮಿಗೆ ಜಾಗ ನೀಡುವುದಾಗಿ ಅಧಿಕಾರಿಗಳು ಹಾಗೂ ನ್ಯಾಮತಿ ಪೊಲೀಸರು ಭರವಸೆ ನೀಡಿದ್ದರಿಂದ ಶವ ಬೇರೆ ಕಡೆ ಸಾಗಿಸಲಾಗಿದೆ.