ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಬರೆಯಲು ಕೊಪ್ಪಳಕ್ಕೆ ಬಂದ ಅಭ್ಯರ್ಥಿಗಳು ಶೌಚಾಲಯ ಇಲ್ಲದೆ ಪರದಾಡಿದ್ದಾರೆ. ಗಂಗಾವತಿ ತಾಲೂಕಿನಾದ್ಯಂತ 21 ಪರೀಕ್ಷಾ ಕೇಂದ್ರಗಳಿದ್ದು ಬರೋಬ್ಬರಿ 8,300 ಜನ ಇಂದು ಪರೀಕ್ಷೆ ಬರೆಯಲ್ಲಿದ್ದಾರೆ.
ನಿನ್ನೆ ರಾತ್ರಿಯೇ ಗಂಗಾವತಿಗೆ ಆಗಮಿಸಿದ್ದ ಪರೀಕ್ಷಾ ಅಭ್ಯರ್ಥಿಗಳು ಶೌಚಾಲಯ ಸೇರಿದಂತೆ ಇತರ ಮೂಲ ಸೌಕರ್ಯಗಳಿಲ್ಲದೆ ಪರದಾಡುವಂತಾಯ್ತು. ಬಸ್ ನಿಲ್ದಾಣದಲ್ಲಿರುವ ಒಂದೇ ಒಂದು ಶೌಚಾಲಯದ ಮುಂದೆ ನೂರಾರು ಜನ ಕ್ಯೂ ನಿಂತಿದ್ದ ದೃಶ್ಯ ನಗರಸಭೆ ನಿಷ್ಕಾಳಜಿ ತೋರಿಸಿಕೊಡುತ್ತಿತ್ತು. ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ್ ಅವರು ತಮ್ಮ ಒಡೆತನದ ‘ಸರೋಜಮ್ಮ ಕಲ್ಯಾಣ ಮಂಟಪ’ದಲ್ಲಿ ಕೆಲ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟು ಮಾನವೀಯತೆ ಮೆರೆದರು. ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿದ್ದ ಕಾರಣ ಇನ್ನುಳಿದ ವಿದ್ಯಾರ್ಥಿಗಳು ಕೊರೆಯುವ ಚಳಿಯ ನಡುವೆ ಬಸ್ ನಿಲ್ದಾಣದಲ್ಲೇ ಕಾಲ ಕಳೆಯುವಂತಾಯ್ತು. ತಾತ್ಕಾಲಿಕ ಶೌಚಾಲಯವನ್ನಾದರೂ ಕಲ್ಪಿಸಬೇಕಾಗಿತ್ತು. ಇಲ್ಲಿನ ನಗರ ಸಭೆ ಅದನ್ನೂ ಮಾಡಲಿಲ್ಲಾ ಎಂದು ಶೌಚಾಲಯ ಮುಂದೆ ಕ್ಯೂ ನಿಂತಿದ್ದ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ರು.