ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ನೀತಿ ಕಾನೂನುಗಳು ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯಂತಹ ಕಾರ್ಪೊರೇಟ್ ಕಂಪನಿಗಳ ಪರವಾಗಿವೆ ಎಂದು ಆರೋಪಿಸಿರುವ ರೈತರು ಅವರ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡಿದ್ದಾರೆ. ಇದು ದೇಶಾದ್ಯಂತ ವ್ಯಾಪಕ ಮೆಚ್ಚುಗೆ ಗಳಿಸಿ ಜಿಯೋ ಕಂಪನಿಗೆ ಹೊಡೆತ ಕೊಟ್ಟಿತ್ತು.
ಈಗ ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಆಂದೋಲನ ಆರಂಭವಾಗಿದೆ. ಇದೀಗ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಎಚ್.ಆರ್. ಬಸವರಾಜಪ್ಪನವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸಾಮೂಹಿಕವಾಗಿ ಜಿಯೋ ಸಿಮ್ನಿಂದ ಏರ್ಟೆಲ್ ಸಿಮ್ಗೆ ಪೋರ್ಟ್ ಆಗಲು ನಿರ್ಧರಿಸಿದ್ದಾರೆ. ಅದರಂತೆ, ಇಂದು ಶಿವಮೊಗ್ಗದ ಶಿವಮೂರ್ತಿ ವೃತ್ತದಲ್ಲಿರುವ ಏರ್ಟೆಲ್ ಕಚೇರಿ ಮುಂಭಾಗ ಕಾರ್ಯಕರ್ತರೊಂದಿಗೆ ಎಚ್.ಆರ್ ಬಸವರಾಜಪ್ಪನವರ ನೇತೃತ್ವದಲ್ಲಿ ತಮ್ಮ ಜಿಯೋ ನಂಬರ್ನಿಂದ ಹೊರಬಂದು ಏರ್ಟೆಲ್ ಚಂದಾದಾರರಾದರು. ಈ ಮೂಲಕ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸಪೋರ್ಟ್ ಮಾಡಿದ್ದು, ರೈತ ಚಳವಳಿಯನ್ನು ಗಟ್ಟಿಗೊಳಿಸಲು, ಕಾರ್ಪೊರೇಟ್ ಕಂಪನಿಗಳನ್ನು ವಿರೋಧಿಸಲು ರೈತರು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಎಸ್. ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ. ಜಗದೀಶ್, ಜಿಲ್ಲಾ ಮುಖಂಡರಾದ ಪಿ.ಶೇಖರಪ್ಪ, ಎಂ.ಡಿ ನಾಗರಾಜ ಸೇರಿದಂತೆ ಇತರರಿದ್ದರು.