ಶಿರಡಿ : ಶ್ರೀ ಸಾಯಿಬಾಬಾ ಜನ್ಮಸ್ಥಳದ ಕುರಿತಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನೀಡಿರುವ ವಿವಾದಾತ್ಮಕೆ ಹೇಳಿಕೆಯನ್ನು ವಿರೋಧಿಸಿ, ಶಿರಡಿ ದೇವಾಲಯದ ಆಡಳಿತ ಮಂಡಳಿ ಭಾನುವಾರದಿಂದ ಅನಿರ್ದಿಷ್ಟಾವಧಿ ದೇವಾಲಯ ಬಂದ್ ಮಾಡಲು ನಿಶ್ಚಯಿಸಿದೆ.
ಇತ್ತೀಚೆಗೆ ಫರ್ಬಾನಿಯಾ ಪತ್ರಿಯ ಅಭಿವೃದ್ಧಿಗೆ 100 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಮಾತನಾಡಿದ್ದ ಉದ್ಧವ್ ಠಾಕ್ರೆ, ಶ್ರೀ ಸಾಯಿಬಾಬಾ ಜನ್ಮಸ್ಥಳ ಫರ್ಬಾನಿಯಾ ಪತ್ರಿ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಶಿರಡಿ ದೇವಾಲಯದ ಆಡಳಿತ ಮಂಡಳಿ ದೇವಾಲಯವನ್ನು ತೆರಯದಿರಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ನ ಬಾವು ಸಾಹೇಬ್ ವಕ್ಟಾರೆ, ಸಾಯಿಬಾಬಾ ಜನ್ಮಸ್ಥಳದ ಬಗ್ಗೆ ಮುಖ್ಯಮಂತ್ರಿಗಳು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಶನಿವಾರ ಸ್ಥಳಿಯರೊಂದಿಗೆ ಸಭೆ ನಡೆಸಿ ಭಾನುವಾರದಿಂದ ಅನಿರ್ದಿಷ್ಟಾವಧಿವರೆಗೆ ಶಿರಡಿ ದೇವಾಲಯವನ್ನು ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಫರ್ಬಾನಿ ಜಿಲ್ಲೆಯ ಅಭಿವೃದ್ಧಿಯ ಕುರಿತು ಮಾತನಾಡುವ ಸಂದರ್ಭದಲ್ಲಿ, ಫರ್ಬಾನಿಯಾ ಪತ್ರಿ ಸಾಯಿಬಾಬಾ ಅವರ ಜನ್ಮಸ್ಥಳವಾಗಿದೆ. ಇದನ್ನು ಅಭಿವೃದ್ಧಿಪಡಿಸಿ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸುವ ಬಗ್ಗೆ ಹೇಳಿದ್ದರು. ಇದರಿಂದ ಶಿರಡಿ ದೇವಾಲಯ ಮಂಡಳಿ ತೀವ್ರ ಅಸಮಾಧಾನಗೊಂಡಿದೆ.