ವಿಜಯಪುರ : ಸೆಕ್ಯುರಿಟಿ ಗಾರ್ಡ್ ಹತ್ಯೆಗೈದು ಎಟಿಎಂ ದರೋಡೆ ಮಾಡಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸಿಂದಗಿ ಪಟ್ಟಣದ ಐಸಿಐಸಿಐ ಬ್ಯಾಂಕ್ ನ ಎಟಿಎಂ ನಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ರಾಹುಲ್ ರಾಠೋಡ (22) ಮೃತ ಸೆಕ್ಯುರಿಟಿ ಗಾರ್ಡ್.
ಸಿಂದಗಿ ಪಟ್ಟಣದ ಎಪಿಎಂಸಿ ಬಳಿಯ ಐಸಿಐಸಿಐ ಬ್ಯಾಂಕ್ ನ ಎಟಿಎಂಗೆ ತಡರಾತ್ರಿ 1.30 ರ ಸುಮಾರಿಗೆ ನುಗ್ಗಿರುವ ದರೋಡೆಕೋರರು ಮೊದಲು ಎಟಿಎಂ ಬಳಿ ಮಲಗಿದ್ದ ಸೆಕ್ಯುರಿಟಿ ಗಾರ್ಡ್ ರಾಹುಲ್ ರಾಠೋಡನನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ. ನಂತರ ಎಟಿಎಂಗೆ ನುಗ್ಗಿದ ದರೋಡೆಕೋರರು ಹಣ ಎಗರಿಸಲು ಅದೇ ಸುತ್ತಿಗೆಯಿಂದ ಎಟಿಎಂ ಮಷೀನ್ ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ.
ಮೂವರು ದರೋಡೆಕೋರರು ಎಟಿಎಂನಲ್ಲಿದ್ದ ಹಣ ದೋಚಲು ಆಗಮಿಸಿರುವುದು ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂವರು ಮಂಕಿ ಕ್ಯಾಪ್ ಹಾಕಿಕೊಂಡು ಆಗಮಿಸಿದ್ದರಿಂದ ಅವರ ಗುರುತು ಪತ್ತೆಯಾಗಿಲ್ಲ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಆರೋಪಿಗಳ ಕುರುಹು ಪತ್ತೆ ಹಚ್ಚಲು ಪಯತ್ನ ನಡೆಸಿದ್ದಾರೆ.
ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.