ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ನಡೆಯನ್ನು ಅನುಸರಿಸಲು ರೆಡಿಯಾಗಿದ್ದಾರೆ.
ಹೌದು ಕನ್ನಡ ಚಿತ್ರರಂಗದಲ್ಲೀಗ ಮಲ್ಟಿ ಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿವೆ. 2007ರಲ್ಲಿ ತೆರೆಕಂಡ ‘ಅನಾಥರು’ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಟ್ಟಿಗೇ ನಟಿಸಿದ್ರು. ಸಾಧುಕೋಕಿಲಾ ಆ್ಯಕ್ಷನ್ ಕಟ್ ಹೇಳಿದ್ದ ಆ ಸಿನಿಮಾ ಸಕತ್ ಹಿಟ್ ಕೂಡ ಆಗಿತ್ತು. ಈ ಹಿಂದೆಯೂ ಸಾಕಷ್ಟು ಮಲ್ಟಿಸ್ಟಾರ್ ಸಿನಿಮಾಗಳು ಬಂದಿವೆಯಾದರೂ ಪ್ರಸ್ತುತ ಸ್ಟಾರ್ ಪಟ್ಟದಲ್ಲಿ ರಾರಾಜಿಸುತ್ತಿರೋ ನಟರ ಸಿನಿಮಾಗಳ ಪೈಕಿ ಈ ಸಿನಿಮಾವನ್ನು ಮೊದಲು ನೆನಪಿಸಿಕೊಳ್ಳಬಹುದು.
ಇದಾದ ನಂತರ 2016ರಲ್ಲಿ ಉಪೇಂದ್ರ ಮತ್ತೆ ಮತ್ತೊಬ್ಬ ಸ್ಟಾರ್ ಜೊತೆ ಕಾಣಿಸಿಕೊಂಡರು. ಅದೇ ‘ಮುಕುಂದ ಮುರಾರಿ’. ನಂದಕಿಶೋರ್ ಡೈರೆಕ್ಷನ್ ಮಾಡಿದ್ದ ಈ ಸಿನಿಮಾದಲ್ಲಿ ಉಪೇಂದ್ರ ಮತ್ತು ಸುದೀಪ್ ಒಟ್ಟಿಗೆ ಮಿಂಚಿದ್ದರು. ಈ ಸಿನಿಮಾ ಕೂಡ ಹಿಟ್ ಆಗಿತ್ತು.
2017ರಲ್ಲಿ ಶಿವರಾಜ್ಕುಮಾರ್ ಮತ್ತು ಶ್ರೀಮುರಳಿ ‘ಮಫ್ತಿ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ರು. ಡೈರೆಕ್ಟರ್ ನರ್ತನ್ ಶಿವಣ್ಣ ಮತ್ತು ಮುರಳಿ ಅವರನ್ನು ಒಂದೇ ಸ್ಕ್ರೀನ್ನಲ್ಲಿ ತಂದು ಯಶಸ್ವಿ ಕೂಡ ಆಗಿದ್ರು. 2018ರಲ್ಲಿ ಜೋಗಿ ಪ್ರೇಮ್ ನಿರ್ದೇಶನದ ‘ ದಿ ವಿಲನ್’ ರಿಲೀಸ್ ಆಯ್ತು. ಶಿವಣ್ಣ ಮತ್ತು ಸುದೀಪ್ ಒಟ್ಟಿಗೆ ನಟಿಸಿದ್ರು.
ಹೀಗೆ ಸಾಲು ಸಾಲು ಮಲ್ಟಿಸ್ಟಾರ್ ಸಿನಿಮಾಗಳು ಬರುತ್ತಿವೆ. ಇದೀಗ ಒಂದೇ ಸಿನಿಮಾದಲ್ಲಿ ಪುನೀತ್ ಮತ್ತು ಯಶ್ ನಟಿಸುವ ಸೂಚನೆ ನೀಡಿದ್ದಾರೆ. ಒಂದೊಳ್ಳೆ ಕಥೆ ಸಿಕ್ಕರೆ ನಾವಿಬ್ಬರು ಒಟ್ಟಿಗೆ ನಟಿಸ್ತೀವಿ ಅಂತ ಪುನೀತ್ ಮತ್ತು ಯಶ್ ಹೇಳಿದ್ದಾರೆ. ಅಷ್ಟೇ ಅಲ್ದೇ ಆ ಕಾಲ ಬೇಗ ಕೂಡಿ ಬರಲಿ ಅಂತಲೂ ಪ್ರಾರ್ಥಿಸೋದಾಗಿ ಹೇಳಿಕೊಂಡಿದ್ದಾರೆ.