ನವದೆಹಲಿ: ನಿರ್ಭಯಾ ಅತ್ಯಾಚಾರಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ತಿರಸ್ಕರಿಸಿದ್ದಾರೆ.
ಕ್ಯುರೇಟಿವ್ ಅರ್ಜಿಯನ್ನು ಸುಪ್ರಿಂಕೋರ್ಟ್ ತಿರಸ್ಕರಿಸಿದ್ದ ದಿನವೇ ಪವನ್ ತನ್ನ ವಕೀಲರ ಮೂಲಕ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಈ ಮೂಲಕ ಮಾರ್ಚ್ 3 ರಂದು ಜಾರಿಯಾಗಬೇಕಿದ್ದ ಗಲ್ಲುಶಿಕ್ಷೆ ಮುಂದೂಡಲ್ಪಟ್ಟಿತ್ತು. ಇದೀಗ ನಾಲ್ವರು ಅಪರಾಧಿಗಳಿಗೆ ಹೊಸ ಡೆತ್ ವಾರೆಂಟ್ ಜಾರಿಯಾಗಬೇಕಾಗಿದೆ.
ಅಪರಾಧಿಗಳಾದ ಮುಖೇಶ್ (32) ಪವನ್ ಗುಪ್ತಾ(25) ವಿನಯ್ ಶರ್ಮ (26) ಮತ್ತು ಅಕ್ಷಯ್ ಕುಮಾರ್ಸಿಂಗ್(31) ಗಲ್ಲು ಶಿಕ್ಷೆ ಎದುರಿಸಲಿದ್ದಾರೆ.
ಒಟ್ಟು 6 ಮಂದಿ ಅಪರಾಧಿಗಳಲ್ಲಿ 2013ರಲ್ಲಿ ರಾಮ್ಸಿಂಗ್ ಎಂಬ ಅಪರಾಧಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ, ಇನ್ನೊಬ್ಬ ಅಪರಾಧಿ ಕೃತ್ಯ ನಡೆದಾಗ ಅಪ್ರಾಪ್ತನಾಗಿದ್ದರಿಂದ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾನೆ.