-ಚಂದನ್ ಶರ್ಮಾ, ಎಕ್ಸಿಕ್ಯೂಟಿವ್ ಎಡಿಟರ್
ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವ್ರು ಅಧಿಕಾರ ಸ್ವೀಕರಿಸಿ 6 ತಿಂಗಳು ಕಳೆದಿವೆ. ಈ 6 ತಿಂಗಳಲ್ಲಿ ಹಲವಾರು ಜನಪರ ಯೋಜನೆಗಳಿಗೆ, ರೈತಪರ ಕಾಳಜಿಗೆ ಸಾಕ್ಷಿಯಾಗಿದ್ದಾರೆ. ಸಾಲಮನ್ನಾದಿಂದ ಹಿಡಿದು, ಬೇರೆ ಬೇರೆ ಯೋಜನೆಗಳನ್ನು ನಿಭಾಯಿಸಿದ್ದಾರೆ. ಅಂತೆಯೇ ವಿವಾದಗಳಿಂದಲೂ ಹೊರತಾಗಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ತಮ್ಮ ಅನಾರೋಗ್ಯದ ಬಗ್ಗೆ ಮಾತನಾಡುವ ಮೂಲಕ ನನ್ನನ್ನು ಸಂಕಷ್ಟಕ್ಕೆ ದೂಡಬೇಡಿ ಎಂದು ಬಹಿರಂಗವಾಗಿ ಕೇಳಿಕೊಂಡಿದ್ದಾರೆ. ಈ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು, ನನ್ನನ್ನು ಕುರ್ಚಿಯಿಂದ ಇಳಿಸಲು ಪಿತೂರಿ ನಡೆದಿದೆ ಎಂದು ಅಲವತ್ತು ಕೊಂಡಿದ್ದಾರೆ.
ಇರಲಿ, ಒಂದು ಸರ್ಕಾರ ಎಂದ ಮೇಲೆ ವಾದ, ಸಂವಾದ, ಪ್ರತಿವಾದ, ವಿವಾದ ಎಲ್ಲವೂ ಸಹಜ. ಎಲ್ಲರೂ ಎಲ್ಲವನ್ನೂ ಒಪ್ಪಬೇಕೆಂದಿಲ್ಲ. ಹಾಗಂತ ಎಲ್ಲವನ್ನೂ ವಿರೋಧಿಸುವುದೂ ತರವಲ್ಲ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮತ್ತೊಂದು ವಿವಾದಕ್ಕೆ ಕಾರಣವಾಗಿರುವುದು ‘ಎಲ್ಲಿ ಮಲಗಿದ್ಯಮ್ಮಾ..’ ಎಂದು ರೈತ ಮಹಿಳೆಯನ್ನು ಕೇಳುವ ಮೂಲಕ ಮತ್ತು ಸುವರ್ಣಸೌಧಕ್ಕೆ ಟ್ರಾಕ್ಟರ್ ನುಗ್ಗಿಸಿದವರು ಗೂಂಡಾಗಳು ಎಂದು ಹೇಳುವ ಮೂಲಕ. ಇವೆಲ್ಲದರ ಸುತ್ತ ದೊಡ್ಡ ವಿವಾದವೇ ಎದ್ದು ಬಿಟ್ಟಿದೆ. ಹೋರಾಟದ ಛಾಯೆ ಆವರಿಸಿದೆ. ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕು ಅನ್ನುವ ದೊಡ್ಡ ಕೂಗು ಎದ್ದಿದೆ.
ಹಾಗಾದರೆ, ಕುಮಾರಸ್ವಾಮಿ ಅವರು ಹೇಳಲು ಹೊರಟಿದ್ದೇನು..? ವಿವಾದದ ಹೂರಣ ಏನು..? ಅನ್ನದಾತರು ಸಿಟ್ಟಿಗೇಳಲು ಕಾರಣ ಏನು..? ಅನ್ನುವುದರ ಅನ್ವೇಷಣೆಗೆ ಪವರ್ ಟಿವಿ ಇಳಿಯುತ್ತದೆ. ರೈತರು ಮತ್ತು ಯೋಧರ ಪರವಾಗಿ ಪವರ್ ಟಿವಿ ಯಾವತ್ತಿಗೂ ಇರುತ್ತದೆ.
ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವಿತ್ತು. ಸರ್ಕಾರದ ಬಹಳಷ್ಟು ಸಚಿವರೇ ಬಹಳಷ್ಟು ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿದ್ದರು. ಬಿಜೆಪಿ ಸರ್ಕಾರವಿದ್ದಾಗಲೂ ಅದೇ ಕತೆ. ನಿರೀಕ್ಷೆಗೆ ತಕ್ಕ ಬೆಂಬಲ ಬೆಲೆ ಕೊಡಿಸುವುದರಲ್ಲಿ ಅವರೆಲ್ಲಾ ಸೋತಿದ್ದರು. ಈಗಲೂ ಎಲ್ಲಾ ಪಕ್ಷದ ಸಾಕಷ್ಟು ಜನನಾಯಕರು ಬಹಳಷ್ಟು ಸಕ್ಕರೆ ಕಾರ್ಖಾನೆಗಳನ್ನು ಭದ್ರವಾಗಿ ತಮ್ಮ ಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಆದರೆ, ಅವರ್ಯಾರೂ ರೈತರ ಪರ ನಿಂತಿಲ್ಲ. ಹೀಗಿರುವಾಗ ಕಬ್ಬಿಗೆ ಬೆಂಬಲ ಬೆಲೆ ಕೋರಿ ಬೆಳಗಾವಿಯಲ್ಲಿ ಹೋರಾಟಗಳು ಶುರುವಾದವು.
ಜಯಶ್ರೀ ಎನ್ನುವ ರೈತ ಮಹಿಳೆ ಮುಖ್ಯಮಂತ್ರಿಗಳನ್ನು ‘ನಾಲಾಯಕ್’ ಎಂದು ಕರೆದರು. ಇದರಿಂದ ರೊಚ್ಚಿಗೆದ್ದ ಎಚ್ ಡಿಕೆ , ಕಳೆದ ನಾಲ್ಕು ವರ್ಷದಿಂದ ಕೇಳ್ದೇ ಇದ್ದುದು ಈಗ ಯಾಕಮ್ಮ ಕೇಳ್ತಿದ್ಯಾ ಅನ್ನೋ ಅರ್ಥದಲ್ಲಿ ‘ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ಯಮ್ಮಾ’ ಅಂದು ಬಿಟ್ಟರು. ಇನ್ನೂ ಮುಂದುವರೆದು ಹೋರಾಟ ಮಾಡಿದ ರೈತರೆಲ್ಲರನ್ನೂ ಗೂಂಡಾಗಳಿಗೆ ಹೋಲಿಸಿದ್ರು. ಇದ್ರಿಂದ ಹಲವರ ಮನಸ್ಸುಗಳಿಗೆ ಘಾಸಿ ಆಗಿ ಬಿಡ್ತು.
ಮೊದಲೇ ನೋವಲ್ಲಿದ್ದ ರೈತರಿಗೆ , ರೊಚ್ಚಿಗೆದ್ದಿದ್ದ ಅನ್ನದಾತರಿಗೆ ಉರಿಯುವ ಬೆಂಕಿಯಲ್ಲಿ ತುಪ್ಪ ಸುರಿದಂತಾಗಿದ್ದು ಸುಳ್ಳಲ್ಲ. ಮುಖ್ಯಮಂತ್ರಿಗಳು ಪದೇ ಪದೇ ಯಾಕೆ ತಮ್ಮ ಸಂಯಮ ಕಳೆದುಕೊಳ್ಳುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿಗಳು ಎಂದರೆ ನಾಡಿನ ದೊರೆ ಇದ್ದಂತೆ. ರಾಜ್ಯದ ಹಿತ ಕಾಪಾಡುವ ದೇವರಿದ್ದಂತೆ. ಆ ಕ್ಷಣಕ್ಕೆ ಎಚ್ ಡಿಕೆ ಅದೇನನ್ನು ಹೇಳಲು ಹೊರಟರೋ, ಅವರ ಹೇಳಿಕೆಯಲ್ಲಿ ಅದ್ಯಾವ ಅರ್ಥ ಅಡಗಿತ್ತೋ…ಅಪ್ರಸ್ತುತವಾಗಿ ಬಿಡ್ತು. ಆದರೆ, ಹೇಳಿದ ಧಾಟಿ ಇದೆಯಲ್ಲಾ.. ಅನ್ನ ಕೊಡುವ ದೊರೆಗಳಿಗೆ ತೀವ್ರ ನೋವುಂಟು ಮಾಡಿದ್ದಂತೂ ನಿಜ. ಗೂಂಡಾಗಳಿಗೆ ಹೋಲಿಕೆ ಮಾಡಿದ್ದಂತೂ ಅಕ್ಷಮ್ಯ ಅಪರಾಧ!
ಕುಮಾರಸ್ವಾಮಿಯವರು ಪರಿಸ್ಥಿತಿಯನ್ನು ಇನ್ನಷ್ಟು Matured ಆಗಿ ಹ್ಯಾಂಡಲ್ ಮಾಡಬಹುದಿತ್ತು. ಅವರ ನಿಲುವುಗಳನ್ನು ಮತ್ತಷ್ಟು Refined ಆಗಿ ಯಾರಿಗೂ ನೋವಾಗದಂತೆ , ವಿವಾದವಾಗದಂತೆ, ಸಮಸ್ಯೆಯಾಗದಂತೆ ಸ್ಪಷ್ಟವಾಗಿ ವ್ಯಕ್ತಪಡಿಸಬಹುದಿತ್ತು. ರೈತವರ್ಗದ ಕಷ್ಟ ಶೋಚನೀಯ. ನಮ್ಮನ್ನು ಕಾಯುವ, ನಮಗೆ ಪ್ರೀತಿ ಕೊಡುವ , ನಮ್ಮ ಹೊಟ್ಟೆ ತುಂಬಿಸುವ ಅನ್ನದಾತರ ಕೊರಗು ದೊಡ್ಡದು. ಹೀಗಿರುವಾಗ, ಒಬ್ಬ ಮುಖ್ಯಮಂತ್ರಿಗಳ ಮಾತು ಕೊಡುವ ಒಳಾರ್ಥ ಏನೇ ಆಗಿರಲಿ. ಅದರ ಭಾವಾರ್ಥ ಸಾವಿರವಿರಲಿ. ಆದರೆ, ಒಬ್ಬ ಮುಖ್ಯಮಂತ್ರಿಯಾದವರು ರೈತರ ಬಗ್ಗೆ ಮಾತನಾಡುವಾಗ, ಅನ್ನಕೊಡುವ ಧಣಿಗಳ ಬಗ್ಗೆ ಮಾತನಾಡುವಾಗ ಸಂಯಮ ವಹಿಸಬೇಕಷ್ಟೇ…
ಇಲ್ಲಿ ಯಾರನ್ನೋ ಸಮರ್ಥಿಸುವ ಸಲುವಾಗಿಯೋ, ಮತ್ಯಾರನ್ನೋ ದೂಷಿಸುವ ಸಲುವಾಗಿಯೋ ಪವರ್ ಟಿವಿ ಯಾವತ್ತಿಗೂ ನಿಲ್ಲುವುದಿಲ್ಲ. ನಮ್ಮ ಕಾಳಜಿ ರೈತ ಪರ, ನಮ್ಮ ನಿಲುವು ರಾಜ್ಯದ ಪರ.
ಎಲ್ಲವನ್ನೂ ಗಮನಿಸುವಾಗ.. ಮುಖ್ಯಮಂತ್ರಿಗಳು ಸ್ವಲ್ಪ ಸಂಯಮ ತಂದುಕೊಳ್ಳಬೇಕು ಅನಿಸುವುದು ನಿಜ. ಹೇಳಿಕೆಗಳನ್ನು ಕೊಡುವ ಮುನ್ನ ಎಚ್ಚರವಹಿಸಬೇಕು. ಜೊತೆಗೆ ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಸರ್ಕಾರಗಳು ಬರುತ್ತವೆ ಹೋಗುತ್ತವೆ, ಮುಖ್ಯಮಂತ್ರಿಗಳು ಬರುತ್ತಾರೆ, ಬದಲಾಗುತ್ತಾರೆ. ಈ ಸರ್ಕಾರದ ಆಯಸ್ಸಿನ ಬಗ್ಗೆ ಚರ್ಚೆ ಒತ್ತಟ್ಟಿಗಿರಲಿ. ಕುಮಾರಸ್ವಾಮಿಯವರು ಅಧಿಕಾರದಲ್ಲಿರುವಷ್ಟೂ ಕಾಲ ರೈತರ ಪರವಾಗಿರಬೇಕು. ಹ್ಞಾಂ.. ಬಹುಮುಖ್ಯವಾಗಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕು.