ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನಿರ್ಭಯಾ ಪ್ರಕರಣದಲ್ಲಿ ತನಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಪವನ್ ಗುಪ್ತಾ, ‘‘2012 ರಲ್ಲಿ ಘಟನೆ ನಡೆದಾಗ ನಾನು ಅಪ್ರಾಪ್ತನಾಗಿದ್ದೆ. ಹಾಗಾಗಿ ನನಗೆ ವಿಧಿಸಿರುವ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿ” ಎಂದು 2017 ರ ಡಿಸೆಂಬರ್ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದ. ಆ ಅರ್ಜಿಯನ್ನು ಸುಪ್ರೀಂಕೋರ್ಟ್ 2018 ರ ಜುಲೈನಲ್ಲಿ ವಜಾಗೊಳಿಸಿತ್ತು. ಅರ್ಜಿ ವಜಾ ಆಗಿದ್ದನ್ನು ಪ್ರಶ್ನಿಸಿ ಪವನ್ ಗುಪ್ತಾ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದ. ಇದೀಗ ಅದನ್ನು ಸುಪ್ರೀಂಕೊರ್ಟ್ ವಜಾಗೊಳಿಸಿದೆ.
ನಿರ್ಭಯಾ ಪ್ರಕರಣದ ಅಪರಾಧಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್ ಠಾಕೂರ್ ಹಾಗೂ ಪವನ್ ಗುಪ್ತಾ ನಾಲ್ವರನ್ನೂ ಶುಕ್ರವಾರ ಬೆಳಗ್ಗೆ 5.30 ಕ್ಕೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗುತ್ತದೆ.