ಶಿವಮೊಗ್ಗ: ಗ್ರಾಮದ ಜನರೇ ಸೇರಿಕೊಂಡು, ಗ್ರಾಮದ ಕೆರೆಗಳನ್ನು ಅಭಿವೃದ್ಧಿಗೊಳಿಸಿದ ಮುತ್ತಲ ಗ್ರಾಮಕ್ಕೆ ನಟ ನೀನಾಸಂ ಸತೀಶ್ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮುತ್ತಲ ಗ್ರಾಮದಲ್ಲಿ ಎರಡು ಕೆರೆಗಳನ್ನು ಜನರೆಲ್ಲರೂ ಸೇರಿ ಅಭಿವೃದ್ಧಿಪಡಿಸಿದ್ದಾರೆ. ಇಲ್ಲಿನ ಕೆರೆಗಳಲ್ಲಿ ಹೂಳು ತುಂಬಿ ನೀರು ನಿಲ್ಲದೆ, ಕೃಷಿ ಮಾಡಲು ಅನಾನುಕೂಲ ಉಂಟಾಗಿತ್ತು. ಮೂಲೆಗದ್ದೆ ಮಠದ ಸ್ವಾಮೀಜಿಗಳು, ಸಾರಾ ಸಂಸ್ಥೆ ಹಾಗೂ ಸ್ವಗ್ರಾಮ ಯೋಜನೆ ಇವರುಗಳು ಕೈ ಜೋಡಿಸಿ, ಗ್ರಾಮಸ್ಥರ ನೆರವಿಗೆ ನಿಂತು, ಈ ಮುತ್ತಲ ಕೆರೆಯನ್ನು ಕಳೆದ ವರ್ಷ ಅಭಿವೃದ್ಧಿ ಪಡಿಸಿದ್ದರು. ಕೇವಲ ಮುತ್ತಲ ಕೆರೆ ಅಲ್ಲದೇ, ಗ್ರಾಮದ ಇತರೇ ಕೆರೆಗಳನ್ನು ಕೂಡ ಪುನಶ್ಚೇತನ ಕಾರ್ಯವನ್ನು ವೀಕ್ಷಿಸಿ, ಪ್ರಶಂಸೆ ವ್ಯಕ್ತಪಡಿಸಿದರು.
ಹೀಗಾಗಿ, ಮುತ್ತಲ ಕೆರೆಯಲ್ಲಿ ನೀರು ನಿಂತಿದ್ದು, ಗ್ರಾಮಸ್ಥರಿಗೆ ಅನುಕೂಲವಾಗಿದೆ. ಅಲ್ಲದೇ ಹಲವಾರು ಪ್ರಾಣಿ ಪಕ್ಷಿ ಸಂಕುಲದ ದಾಹ ತಣಿಸಲು ಸಹಕಾರಿಯಾಗಿದೆ. ಕೆರೆ ತುಂಬಿರುವ ಕಾರಣ ಗ್ರಾಮಸ್ಥರು ಕೆಲಸಕ್ಕಾಗಿ ವಲಸೆ ಹೋಗುವುದನ್ನು ಬಿಟ್ಟು ತಮ್ಮ ಗ್ರಾಮದಲ್ಲಿಯೇ ಕೃಷಿಯತ್ತ ಮುಖ ಮಾಡಿದ್ದಾರೆ. ಈ ಮೂಲಕ, ನೂರಾರು ಎಕರೆ ಕೃಷಿಭೂಮಿಗೆ ನೀರುಣಿಸುವ ಮೂಲಕ ಹಸಿರೀಕರಣಕ್ಕೆ ಈ ಕೆರೆ ಕಾರಣವಾಗಿದೆ. ಅಂದಹಾಗೆ, ಈ ಕೆರೆ ಅಭಿವೃದ್ಧಿಯ ಬಗ್ಗೆ ತಮ್ಮ ಸ್ನೇಹಿತರಿಂದ ತಿಳಿದ ನಟ ನೀನಾಸಂ ಸತೀಶ್ ಅಲಿಯಾಸ್ ಕ್ವಾಟ್ಲೇ ಸತಿಸಾ, ಮುತ್ತಲ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಜನರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುತ್ತಲ ಗ್ರಾಮಸ್ಥರು ಮಾಡಿರುವ ಒಳ್ಳೆಯ ಕಾರ್ಯವನ್ನು ಬೇರೆ ಗ್ರಾಮದವರು ಕೂಡ ಅನುಸರಿಸಬೇಕು ಎಂದು ನೀನಾಸಂ ಸತೀಶ ಈ ವೇಳೆ, ಕರೆ ನೀಡಿದರು. ಈ ಸಂದರ್ಭದಲ್ಲಿ, ನಿರ್ದೇಶಕ ಗಣೇಶ್, ಗುರುಮೂರ್ತಿ, ಮಂಜುನಾಥ್ ಬ್ಯಾಣದ್, ಸತೀಶ್ ಹಂಜಾ, ರಮೇಶ್, ನಟ ಏಸು ಪ್ರಕಾಶ್ ಸೇರಿ ಗ್ರಾಮಸ್ಥರು ಹಾಜರಿದ್ಧರು.