ಬೆಂಗಳೂರು: ಇಷ್ಟು ದಿನ ಕೊರೋನಾ ವೈರಸ್ ಜನರ ಬದುಕನ್ನ ಹಿಂಡಿ ಹಿಪ್ಪೆ ಮಾಡಿತ್ತು. ಸದ್ಯ ಸ್ವಲ್ಪ ರಿಲ್ಯಾಕ್ಸ್ ಆಯ್ತು ಅನ್ನುವಷ್ಟರಲ್ಲಿ, ಇದೀಗ ಮತ್ತದೇ ಕೊರೋನಾ ವೈರಸ್ ರೂಪಾಂತರವಾಗಿ ಕಾಡಲು ಆರಂಭಿಸಿದೆ. ಬರೀ ಇಂಗ್ಲೆಂಡ್ನಲ್ಲಿ ಮಾತ್ರವಲ್ಲದೇ ಈ ಬ್ರಿಟನ್ ವೈರಸ್ ಬೆಂಗಳೂರಿಗೂ ಕಾಲಿಟ್ಟಿರೋ ಶಂಕೆ ಆರಂಭವಾಗಿದೆ. ಇದು ಈಗ ಜನರ ನಿದ್ದೆ ಕೆಡಿಸಿದೆ.
ಯುಕೆಯಲ್ಲಿ ಹೊಸ ಕೊರೋನಾ ವೈರಸ್ ರೂಪಾಂತರ ಕಾಣಿಸಿಕೊಂಡಿದೆ. ಇದು ಚೆನೈ ಮತ್ತು ದೆಹಲಿಯಲ್ಲಿ ಕಾಣಿಸಿಕೊಂಡಿರೋ ಶಂಕೆ ವ್ಯಕ್ತ ವಾಗಿದ್ದು, ದೇಶಾದ್ಯಂತ ಆತಂಕ ಸೃಷ್ಟಿಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಯುಕೆಯಿಂದ ಬಂದವರ ಮೇಲೆ ಕಣ್ಣಿಡಲು ಸೂಚಿಸಿದೆ. ಆದರೆ ಇದುವರೆಗೂ ಬ್ರಿಟನ್ನಲ್ಲಿರೋ ರೂಪಾಂತರ ವೈರಸ್ ದೇಶದಲ್ಲಿ ಇನ್ನೂ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದರ ಬೆನ್ನಲ್ಲೇ ಬೆಂಗಳೂರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಮತ್ತು ಕಾರವಾರ ಬಂದರು ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಯುಕೆಯಿಂದ ಬಂದವರ ಪಟ್ಟಿ ಕೊಡುವಂತೆ ಹೇಳಿದೆ. ಅಲ್ಲದೇ ಇಂದು ನಡೆದ ಕೊರೋನಾ ತಾಂತ್ರಿಕ ಸಮಿತಿ ಸಭೆಯಲ್ಲಿ ಆರ್ ಟಿ ಪಿಸಿಅರ್ ಟೆಸ್ಟ್ ನಲ್ಲಿ ಕೊರೋನಾ ಪಾಸಿಟಿವ್ ಬಂದರೆ ಅವರಿಗೆ ಕಡ್ಡಾಯವಾಗಿ ರಕ್ತದ ಮಾದರಿ ಸ್ಯಾಂಪಲ್ ತೆಗೆದು ಪರೀಕ್ಷಿಸಲು ಹೇಳಿದೆ. ಹಾಗೇ ನೂರಾರು ಜನ ಇದೀಗ ಲಂಡನ್ನಿಂದ ವಾಪಾಸಾಗಿದ್ದು, ಅವರಿಗೂ ಹೊಸ ಕೊರೋನಾ ವೈರಸ್ ಆತಂಕ ಶುರುವಾಗಿದೆ. ಇದರ ನಡುವೆ ಹರ್ಷಿಕಾ ಪೂಣಚ್ಚ ಕೂಡ ಲಂಡನಿಂದ ವಾಪಾಸ್ ಆಗಿದ್ದು, ನಾನು ಸೇಫ್ ಆಗಿದ್ದೀನಿ ಅಂತಾ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿಗೂ ಕಾಲಿಟ್ಟೇ ಬಿಡ್ತಾ ಡೆಡ್ಲಿ ವೈರಸ್..?
ಸದ್ಯ ಯುಕೆಯಿಂದ ಬರೋ ವಿಮಾನಗಳಿಗೆ ನಿರ್ಬಂಧ ಹೇರಲಾಗಿದೆ. ಆದರೆ ಈ ಹಿಂದೆ ಸಾವಿರಾರು ಜನ ಕರ್ನಾಟಕಕ್ಕೆ ಬಂದಿರೋ ಮಾಹಿತಿಯಿದೆ. ಡಿಸೆಂಬರ್ 19 ಮತ್ತು 20ರಂದು ಬಂದ 420 ಜನ ಬೆಂಗಳೂರಿನಿಂದ ತಮ್ಮ ಜಿಲ್ಲೆಗಳಿಗೆ ವಾಪಾಸ್ ಆಗಿದ್ದಾರೆ. ಹೀಗಾಗಿ ಆ ಜಿಲ್ಲೆಗಳಿಗೂ ಹೊಸ ಬ್ರಿಟನ್ ವೈರಸ್ ಹರಡುವ ಆತಂಕ ಉಂಟಾಗಿದೆ. ಅಲ್ಲದೇ ಇದರಲ್ಲಿ ಇನ್ನೂ ಹಲವು ಜನರ ಟೆಸ್ಟ್ ಮಾಡಿಸೋದು ಬಾಕಿ ಇದ್ದು, ಆತಂಕ ಹುಟ್ಟಿಸಿದೆ. ಇದರ ನಡುವೆಯೇ ಯುಕೆಯಿಂದ ಬೆಂಗಳೂರಿಗೆ ಬಂದ ಬೊಮ್ಮನಹಳ್ಳಿಯ ವಸಂತಪುರದ 6 ವರ್ಷ ದ ಬಾಲಕಿ ಮತ್ತು ಆಕೆಯ 35 ವರ್ಷದ ತಾಯಿಗೆ ಕೊರೋನಾ ಪಾಸಿಟಿವ್ ಬಂದಿರೋದು ಆತಂಕ ಮೂಡಿಸಿದೆ. ಅಲ್ಲದೇ ಇವರಿಗೆ ಇರೋದು ಹೊಸ ಕೊರೋನಾ ವೈರಸ್ ಅನ್ನೋ ಆತಂಕ ಹೆಚ್ಚಾಗಿದೆ.
ಸದ್ಯ ಆ ತಾಯಿ, ಮಗಳ ರಕ್ತದ ಮಾದರಿಯನ್ನ ಪುಣೆಯ ಲ್ಯಾಬ್ ಗೆ ಕಳುಹಿಸಲಾಗಿದ್ದು, ಅಲ್ಲಿನ ರಿಪೋರ್ಟ್ ನಲ್ಲಿ ಕೊವೀಡ್ ವೈರಸ್ ಪಾಸಿಟಿವ್ ಬಂದರೆ ಬೆಂಗಳೂರಿಗೆ ಮತ್ತೊಂದು ಗಂಡಾಂತರ ಕಾಡುವುದರಲ್ಲಿ ಸಂಶಯವಿಲ್ಲ. ಈ ವೈರಸ್ ನಿಂದ ಪಾರಾಗಬೇಕು ಅಂದರೆ ನೀವು ಮಾಸ್ಕ್ ಹಾಕಬೇಕು. ಸರ್ಕಾರದ ಇನ್ನಿತರ ಗೈಡ್ಲೈನ್ಸ್ ಪಾಲಿಸಲೇಬೇಕು.