ಶಿವಮೊಗ್ಗ: ಮಲೆನಾಡು ಜಿಲ್ಲೆ ಶಿವಮೊಗ್ಗದಾದ್ಯಂತ, ಮುಂಗಾರು ಮಳೆ ಬಿರುಸುಗೊಂಡಿದ್ದು, ರೈತರು ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ತುಂಗಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಗಾಜನೂರಿನ ತುಂಗಾ ಜಲಾಶಯ ಭರ್ತಿ ಆಗುವತ್ತಾ ಹೆಜ್ಜೆಯಿಟ್ಟಿದೆ.
ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ತಾಲ್ಲೂಕುಗಳಲ್ಲಿ ಕಳೆದ ಮೂರು ದಿನಗಳಿಂದ ಮುಂಗಾರು ಅಬ್ಬರ ಜೋರಾಗಿದೆ. ಶಿವಮೊಗ್ಗ, ಸೊರಬ, ಭದ್ರಾವತಿ ಹಾಗೂ ಶಿಕಾರಿಪುರ ತಾಲ್ಲೂಕಿನಲ್ಲೂ ಸಾಧಾರಣ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ನಗರದಲ್ಲಿ 5.6 ಮಿ.ಮೀ, ಭದ್ರಾವತಿ 7.2 ಮಿ.ಮೀ, ಶಿಕಾರಿಪುರ 8.4 ಮಿ.ಮೀ, ಸೊರಬ 14.3 ಮಿ.ಮೀ, ಸಾಗರ 18 ಮಿ.ಮೀ, ತೀರ್ಥಹಳ್ಳಿ 32.2 ಮಿ.ಮೀ, ಹೊಸನಗರ 47.2 ಮಿ.ಮೀ ಮಳೆಯಾಗಿದೆ.
ಇನ್ನು ಜಲಾಶಯದಲ್ಲಿ 587.54 ಮೀ ನೀರಿನ ಸಂಗ್ರಹವಾಗಿದೆ. (588 ಮೀ. ಗರಿಷ್ಠ), 1596 ಕ್ಯೂಸೆಕ್ಸ್ ಒಳ ಹರಿವು ಇದ್ದು, 1214 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಯಾವುದೇ ಕ್ಷಣದಲ್ಲಿ ತುಂಗಾ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಲಿಂಗನಮಕ್ಕಿ ಜಲಾಶಯದಲ್ಲಿ 1759.65 ಅಡಿ ನೀರಿನ ಸಂಗ್ರಹವಿದ್ದು, 4475 ಕ್ಯೂಸೆಕ್ಸ್ ಒಳಹರಿವು, 5572 ಕ್ಯೂಸೆಕ್ಸ್ ಹೊರಹರಿವು ಇದೆ. ಭದ್ರಾ ಜಲಾಶಯಕ್ಕೆ ಕೂಡ 3097 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಜಲಾಶಯದ ಮಟ್ಟ 133.6 ಅಡಿಗೆ ತಲುಪಿದೆ. 157 ಕ್ಯೂಸೆಕ್ಸ್ ನೀರು ಹೊರಹೋಗುತ್ತಿದೆ.
ಮುಂಗಾರು ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕಾಗಿದೆ. ಜಿಲ್ಲೆಯಲ್ಲಿ 2 ಲಕ್ಷದ 60 ಸಾವಿರ ಹೆಕ್ಟೇರ್ ಕೃಷಿ ಭೂಮಿಯನ್ನು ಹೊಂದಿದ್ದು, 1.12 ಲಕ್ಷ ಹೆಕ್ಟೆರ್ ಭೂಮಿಯಲ್ಲಿ ಅಡಿಕೆ ಬೆಳೆಯಲಾಗಿದೆ. ಉಳಿದ 1.48 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ವಿವಿಧ ಬೆಳೆ ಬೆಳೆಯಲಾಗುತ್ತಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 92 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಭತ್ತ, 53 ಸಾವಿರ ಹೆಕ್ಟೇರ್ನಲ್ಲಿ ಮುಸುಕಿನ ಜೋಳ, 1000 ಹೆಕ್ಟೇರ್ನಲ್ಲಿ ಕಬ್ಬು, 365 ಹೆಕ್ಟೇರ್ ಭೂಮಿಯಲ್ಲಿ ಹತ್ತಿ ಬೆಳೆಯುವ ಗುರಿ ಹೊಂದಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 5 ಸಾವಿರ ಹೆಕ್ಟೇರ್ ಕೃಷಿ ಭೂಮಿ ಈ ಬಾರಿ ಕಡಿಮೆಯಾಗಿದೆ. ಕಳೆದ ವರ್ಷದಲ್ಲಿ 1 ಲಕ್ಷದ 53 ಸಾವಿರ ಹೆಕ್ಟೆರ್ ಭೂಪ್ರದೇಶದಲ್ಲಿ ವಿವಿಧ ಬೆಳೆ ಬೆಳೆಯಲಾಗಿತ್ತು.