ಅವರು ಪ್ರಗತಿಪರ ಹಿರಿಯ ರೈತ. ಇಡೀ ಜೀವನವನ್ನು ಕೃಷಿಗೆ ಅಂತಾನೇ ಮೀಸಲಿಟ್ಟಿರುವವರು. ವಯಸ್ಸಾದರೂ ಹೊಸತನದಿಂದ ಹಿಂದೆ ಸರಿದಿಲ್ಲಾ. ಅವರು ಮಾಡೋ ವಿಭಿನ್ನ ಕೃಷಿಗೆ ಜನ ಆಡಿಕೊಂಡಿದ್ದು ಅಷ್ಟಿಷ್ಟಲ್ಲಾ…! ಹಾಗಂತ ಜನರಾಡೋ ಮಾತಿಗೆ ತಲೆನೂ ಕೆಡಿಸಿಕೊಂಡಿಲ್ಲ… ಅವರೆದುರೇ ಅವರೀಗ ಕೋಟಿಗೊಬ್ಬ.
ಬರಡು ಭೂಮಿಯಲ್ಲಿ ಸೊಂಪಾಗಿ ಬೆಳೆದು ನಿಂತಿರೋ ಬೆಳೆ.. ಮುಗಿಲೆತ್ತರಕ್ಕೆ ಮುಖ ಮಾಡಿ ಹೊಲದಲ್ಲಿಯೂ ಅರಣ್ಯ ನೆನಪಿಸೋ ವಿಶಿಷ್ಟ ಮರಗಳು. ಇವುಗಳನ್ನ ಕಣ್ತುಂಬಿಕೊಳ್ತಿರೋ ಹಿರಿಯ ರೈತ ದಂಪತಿ. ಈ ಮಿನಿ ಅರಣ್ಯ ಕಂಡು ಬರುವುದು ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ.
ಇದು ನೈಸರ್ಗಿಕ ಕಾಡಲ್ಲ. ಬದಲಾಗಿ ರೈತನೇ ತನ್ನ ಹೊಲದಲ್ಲಿ ಈ ರೀತಿಯ ಮರಗಳನ್ನ ಬೆಳೆಸಿ ಅರಣ್ಯ ಸೃಷ್ಠಿ ಮಾಡಿದ್ದಾರೆ ರೈತ . ಪಟ್ಟಣದ ಪ್ರಗತಿಪರ ಹಿರಿಯ ರೈತ ಚಂದ್ರಹಾಸ ಉಳ್ಳಾಗಡ್ಡಿ ಕೋಟಿಗಟ್ಟಲೆ ಆದಾಯ ತಂದುಕೊಡೋ ಮಹಾಘನಿ ಅನ್ನೋ ಬೆಳೆಯನ್ನು ಬೆಳೆಯುತ್ತಿದ್ದಾರೆ. ತಮ್ಮ 7 ಎಕರೆ ಜಮೀನಿನಲ್ಲಿ ಸುಮಾರು 1 ಲಕ್ಷ ರೂಪಾಯಿ ಖರ್ಚು ಮಾಡಿ ಈ ಗಿಡಗಳನ್ನು ನೆಟ್ಟಿದ್ದಾರೆ. ಮುಖ್ಯವಾಗಿ ಗಿಡಗಳ ದಿನ್ನೆಗಳು ಹಡಗು ತಯಾರಿಕೆಗೆ ಬಳಸಲಾಗುತ್ತೆ. ಹೀಗಾಗಿ ಈ ಮಹಾಘನಿ ಬೆಳೆಗೆ ಬಹಳಷ್ಟು ಬೇಡಿಕೆಯಿದೆ. ಅದು ಕೋಟಿ ಕೋಟಿ ಆದಾಯ ನೀಡೋ ಬೆಳೆಯಾಗಿದ್ದು, ಚಂದ್ರಹಾಸ ಉಳ್ಳಾಗಡ್ಡಿಯವನ್ನು ಅದೀಗ ಕೋಟ್ಯಾಧೀಶರನ್ನಾಗಿ ಮಾಡಲಿದೆ.
ಚಂದ್ರಹಾಸ ಈ ಗಿಡಗಳನ್ನ ನೆಟ್ಟಾಗ ಜನ್ರೆಲ್ಲಾ ಹುಚ್ಚ ಅಂತ ಜರಿದಿದ್ದರಂತೆ. ಒಳ್ಳೆಯ ಜಮೀನನ್ನು ಹಾಳು ಮಾಡಿಕೊಳ್ತಿದ್ದಾನೆ ಅಂತ ಅವಮಾನಿಸಿದ್ರಂತೆ. ಆದ್ರೆ, ಈಗ ಇದೇ ಗಿಡಗಳು ಚಂದ್ರಹಾಸ ಅವರನ್ನ ಎತ್ತರಕ್ಕೆ ತಂದು ನಿಲ್ಲಿಸಿವೆ. ಇನ್ನು 5 ವರ್ಷ ಕಳೆದ್ರೆ ಚಂದ್ರಹಾಸ ಕೋಟ್ಯಾಧೀಶರಾಗುವ ನೀರಿಕ್ಷೆ ಇಮ್ಮಡಿಗೊಳಿಸಿವೆ. 5 ವರ್ಷಗಳ ಹಿಂದೆ ಮಹಾರಾಷ್ಟ್ರದ ಕಂಪನಿಯಿಂದ ಖರೀದಿಸಿದ ಸಸಿಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿವೆ.
ಆಮ್ಲಜನಕ ದೃಷ್ಠಿಯಿಂದ ಈ ಬೆಳೆಗೆ ವಿಶ್ವ ಪರಿಸರ ಸಂಸ್ಥೆಯಿಂದಲೂ 50 ಸಾವಿರ ರೂ.ಸಹಾಯಧನ ನೀಡಲಾಗುತ್ತೆ. ಅಲ್ಲದೇ 3 ವರ್ಷದ ನಂತರ ಪ್ರತಿ ಎಕರೆಗೆ ಕಂಪನಿಯವರು 50 ಸಾವಿರ ರೂಪಾಯಿ ಹಣ ನೀಡ್ತಾರೆ. ಹೀಗೆ ಸತತವಾಗಿ 12 ವರ್ಷ ಮರಗಳ ಕಟಾವಿನತನಕ ಪ್ರತಿ ವರ್ಷ ಎಕರೆಗೆ 50 ಸಾವಿರ ನಂತೆ ಅಡ್ವಾನ್ಸ್ ಹಣ ಕೊಡುತ್ತಾ ಹೋಗುತ್ತಾರೆ. ಹೀಗಂತಾ ಕಂಪನಿ ಮೊದಲೇ ಒಡಂಬಡಿಕೆ ಮಾಡಿಕೊಂಡಿರುತ್ತೆ.
ಪ್ರತಿ ಎಕರೆಯಲ್ಲಿ 450 ಕ್ಕೂ ಹೆಚ್ಚು ಮರಗಳು ಬೆಳೆದಿದ್ದು, ಒಟ್ಟು 07 ಎಕರೆಯಲ್ಲಿ 03 ಸಾವಿರಕ್ಕೂ ಅಧಿಕ ಮರಗಳು ಸಮೃದ್ಧವಾಗಿ ಬೆಳೆದು ನಿಂತಿವೆ. ಇನ್ನು ಚರಂಡಿ ನೀರನ್ನೇ ತಮ್ಮ ಹೊಲಕ್ಕೆ ಹರಿಬಿಡೋ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗಿಡದ ಎಲೆಗಳೇ ಇವುಗಳಿಗೆ ಉತ್ಕೃಷ್ಟ ಗೊಬ್ಬರ. ಗಿಡಗಳ ಮಧ್ಯೆ ಅಂತರ ಬೆಳೆಯನ್ನೂ ಬೆಳೆದಿದ್ದಾರೆ. ಶೇಂಗಾ, ಜೋಳ, ಮೆಕ್ಕೆಜೋಳ ಸೇರಿದಂತೆ ನಾನಾ ಥರದ ಬೆಳೆ ಬೆಳೆದು ನಿರಂತರ ಆದಾಯ ಸಹ ಪಡೆಯುತ್ತಿದ್ದಾರೆ.
ಸದ್ಯ ಚಂದ್ರಹಾಸ ಬೆಳೆದಿರೋ ಬೆಳೆಯನ್ನು ರಾಜ್ಯದ ಹಲವು ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಂದ ನೋಡೋದಕ್ಕೆ ಬರ್ತಿದ್ದಾರೆ. ಸಾಯುವ ಮುನ್ನ ಕೃಷಿಯಲ್ಲಿಯೇ ಕೋಟಿ ಆದಾಯ ಗಳಿಸಬೇಕು ಅನ್ನೋದು ಚಂದ್ರಹಾಸವರ ಕನಸು. ಉಳಿದ ರೈತರಿಗೂ ಇದನ್ನ ತೋರಿಸಬೇಕು ಅನ್ನೋದು ಸಹ ಆಶಯ.
ಅದೇನೇ ಇರಲಿ.ಸದಾ ಕೃಷಿಯಲ್ಲಿ ಏನಾದ್ರೂ ಒಂದು ಪ್ರಯೋಗ ಮಾಡ್ಬೇಕು ಅನ್ನೋ ಚಂದ್ರಹಾಸ ಉತ್ತರ ಕರ್ನಾಟಕದಲ್ಲಿ ಯಾರೂ ಮಾಡದ ಕೃಷಿ ಸಾಧನೆ ಮಾಡಲು ಹೊರಟಿದ್ದಾರೆ. ಶುಭವಾಗಲಿ…
–ಮಹಾಲಿಂಗೇಶ್ ಹಿರೇಮಠ. ಗದಗ