ಶಿವಮೊಗ್ಗ: ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಯೋಜನೆಯ ಅನ್ವಯ ಸಮಸ್ತ ಹಿಂದೂ ಸಮಾಜದಿಂದ, ಮಂದಿರ ನಿರ್ಮಾಣಕ್ಕಾಗಿ, ನಿಧಿ ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಎಸ್.ಎಸ್. ನ ದಕ್ಷಿಣ ಕರ್ನಾಟಕದ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ತಿಳಿಸಿದ್ದಾರೆ.
ಇಂದು ಈ ಬಗ್ಗೆ ಮಾದ್ಯಮಗಳಿಗೆ ವಿಷಯ ತಿಳಿಸಿದ ಅವರು, ಅಯೋಧ್ಯೆಯಲ್ಲಿನ ಶ್ರೀ ರಾಮ ಜನ್ಮಭೂಮಿ ಮಂದಿರದ ನಿರ್ಮಾಣಕ್ಕಾಗಿ ಮತ್ತು ಅಲ್ಲಿನ ಇತರೆ ಸೌಲಭ್ಯಗಳಿಗೆ ಅನುಕೂಲವಾಗುವಂತೆ, ದೇಶದಾದ್ಯಂತ ನಿಧಿ ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅದರಂತೆ, 5 ಕಾರ್ಯಕರ್ತರನ್ನೊಳಗೊಂಡ ತಂಡಗಳು, ಶಿವಮೊಗ್ಗ ಜಿಲ್ಲೆಯಲ್ಲಿನ ಎಲ್ಲಾ ಹಳ್ಳಿಗಳನ್ನು ಈ ಅಭಿಯಾನದ ಮುಖಾಂತರ ತಲುಪಿ ನಿಧಿ ಸಮರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಅಭಿಯಾನಕ್ಕೆ ನಿಧಿ ಸಂಗ್ರಹ ಎಂಬ ಹೆಸರು ಕರೆಯುವ ಬದಲಾಗಿ, ನಿಧಿ ಸಮರ್ಪಣೆ ಎಂದು ಹೆಸರಿಸಲಾಗಿದ್ದು, ರಾಜ್ಯದ 27,500 ಹಳ್ಳಿಗಳಲ್ಲಿ, 90 ಲಕ್ಷ ಜನರನ್ನು ತಲುಪಿ, ರಾಮಮಂದಿರಕ್ಕೆ ಧನ ಸಂಗ್ರಹಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅದರಂತೆ, ಸಂಗ್ರಹವಾದ ಅಷ್ಟು ಹಣವನ್ನು, 48 ಗಂಟೆಯೊಳಗಾಗಿ, ತೀರ್ಥಕ್ಷೇತ್ರ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ಜಮಾ ಮಾಡಲು ಯೋಜಿಸಲಾಗಿದೆ.
ಖಾತೆಗೆ ಹಣ ಪಾವತಿಸುವ ವ್ಯವಸ್ಥೆ ಸಂಪೂರ್ಣವಾಗಿ ಪಾರದರ್ಶಕವಾಗಿರಲಿದ್ದು, 10 ರೂ. ನಿಂದ ಹಿಡಿದು 1 ಸಾವಿರ ರೂ. ವರೆಗೂ ಮುದ್ರಿತ ಕೂಪನ್ ಗಳ ಸಹಾಯದಿಂದ ಧನ ಸಂಗ್ರಹ ನಡೆಯಲಿದೆ. 2 ಸಾವಿರ ರೂ. ಗಿಂತಲೂ ಹೆಚ್ಚಿನ ಮೊತ್ತದ ಅರ್ಪಿಸಿದ ಭಕ್ತರಿಗೆ ರಶೀದಿ ನೀಡಲಾಗುವುದು. ಭಕ್ತರು ಭಾರತೀಯ ಆದಾಯ ತೆರಿಗೆ ಕಾಯ್ದೆಯ 80 ಜಿ ಸೆಕ್ಷನ್ ಅಡಿಯಲ್ಲಿ, ತೆರಿಗೆ ವಿನಾಯಿತಿ ಸೌಲಭ್ಯ ಕೂಡ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
2024 ರ ಇಸವಿಯೊಳಗೆ ಶ್ರೀ ರಾಮ ಲಲ್ಲಾನನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಯೋಜಿಸಲಾಗಿದೆ ಎಂದು ಪಟ್ಟಾಭಿರಾಮ್ ತಿಳಿಸಿದ್ದಾರೆ.