ಬೆಂಗಳೂರು; ಸ್ಯಾಂಡಲ್ವುಡ್ನಲ್ಲಿ ಹೊಸ ಹುಡುಗರೆ ಮಾಡಿರುವ ‘ಕಂಬ್ಳಿಹುಳ’ ಸಿನಿಮಾ ಬಿಡುಗಡೆಯಾಗಿದ್ದು ನೋಡುಗರನ್ನ ಮೋಡಿ ಮಾಡಿದ್ದು, ನಟ-ನಟಿಯರು, ಹಿರಿಯ ಕಲಾವಿದರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಲೆನಾಡಿನಲ್ಲಿ ನಡೆಯುವ ಎರಡು ಮುದ್ದಾದ ಜೋಡಿಯ ನವಿರಾದ ಪ್ರೇಮಕಥೆಯನ್ನು ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್.ಹೆಗ್ಡೆ ಜೋಡಿ ಸಹಜ ನಟನೆ ಮೂಲಕ ಪ್ರಾಮಿಸಿಂಗ್ ಡೆಬ್ಯೂ ಆ್ಯಕ್ಟರ್ಸ್ ಎನಿಸುತ್ತಾರೆ. ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ನಡಿ ತಯಾರಾಗಿರುವ ಈ ಚಿತ್ರಕ್ಕೆ ನವನ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.
ಈ ಹಿಂದೆ ಈ ಚಿತ್ರ ತಂಡ ಜೋಡಿ ಕುದುರೆ, ಗೋಣಿಚೀಲ ಮೊದಲಾದ ಕಿರುಚಿತ್ರಗಳ ಮೂಲಕ ನಿರ್ದೇಶನದ ಚಾಕಚಕತ್ಯೆ ಅರಿತಿರುವ ನವನ್ ಶ್ರೀನಿವಾಸ್, ತಮ್ಮ ಕಲ್ಪನೆಯನ್ನ ಯಥಾವತ್ ತೆರೆಯ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಯೋಗರಾಜ್ ಭಟ್, ಸಂತೋಷ್ ಆನಂದ್ ರಾಮ್, ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್, ರಿಷಬ್ ಶೆಟ್ಟಿ, ಅಚ್ಯುತ್ ಕುಮಾರ್, ಧ್ರುವಸರ್ಜಾ, ಅನುಶ್ರೀ, ಸಂಗೀತ ಶೃಂಗೇರಿ, ನಿರ್ದೇಶಕ ಜಯತೀರ್ಥ, ಪವನ್ ಒಡೆಯರ್, 777 ಚಾರ್ಲಿ ನಿರ್ದೇಶಕ ಸೇರಿದಂತೆ ಹಲವಾರು ನಟ-ನಟಿಯರು ಚಿತ್ರವನ್ನು ಮೆಚ್ಚಿ ಹೊಸಬರ ಈ ಚಿತ್ರ ವನ್ನು ಗೆಲ್ಲಿಸಲು ಬೆಂಬಲ ನೀಡಿದ್ದಾರೆ.

ವಿಜಯ್, ನವೀನ್, ಪುನೀತ್ ಹಾಗೂ ಗುರು ಬಂಡವಾಳ ಹೂಡಿದ್ದು, ಸತೀಶ್ ರಾಜೇಂದ್ರ ಛಾಯಾಗ್ರಾಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿ.ಕೆ ಸಂಕಲನ ಸಿನಿಮಾಕ್ಕಿದೆ. ಮತ್ತಷ್ಟು ಶೋಗಳು ಸಿಗುವ ನಿರೀಕ್ಷೆಯಲ್ಲಿ ಚಿತ್ರತಂಡವಿದ್ದು ಕನ್ನಡಿಗರು ಹೊಸಬರ ಚಿತ್ರವನ್ನು ಗೆಲ್ಲಿಸುತ್ತಾರೆಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.


