Thursday, September 11, 2025
HomeUncategorizedರೋಹಿತ್ ಮರು ನೇಮಕ ವಿರೋಧಿಸಿ ಪ್ರತಿಭಟನೆ

ರೋಹಿತ್ ಮರು ನೇಮಕ ವಿರೋಧಿಸಿ ಪ್ರತಿಭಟನೆ

ಬೆಂಗಳೂರು: ರಾಜ್ಯದಲ್ಲಿ ಹೊಸ ಪಠ್ಯ ಪರಿಷ್ಕರಣೆ ವಿವಾದ ತಾರಕ್ಕಕ್ಕೇರುತ್ತಿದೆ. ಯಸ್ ಭಗತ್ ಸಿಂಗ್ ಪಾಠದಿಂದ ಶುರುವಾದ ಎಡವಟ್ಟು ಕುವೆಂಪು, ಅಂಬೇಡ್ಕರ್, ಬಸವಣ್ಣ,ನಾಡು-ನುಡಿ, ಗೌತಮ ಬುದ್ದ ಸೇರಿದಂತೆ ಒಂದೊಂದೇ ವಿವಾದಗಳು ಬುಗಿಲೆದ್ದಿದ್ದವು. ಇದೀಗ ಮತ್ತೆರಡು ವಿವಾದ ಶುರುವಾಗಿದ್ದು ಆಕ್ರೋಶದ ಕಿಡಿ ಹಚ್ಚುತ್ತಿವೆ.

ಕನ್ನಡ ಭಾಷೆಯ 7ನೇ ತರಗತಿಯ ಪಠ್ಯದಲ್ಲಿ ಗೊಂಬೆ ಕಲಿಸುವ ನೀತಿ ಪಾಠ ಎಂಬ ಪದ್ಯ ಇದೆ. ಈ ಹಾಡು ಡಾ ರಾಜಕುಮಾರ್ ಅಭಿನಯದ ಕಸ್ತೂರಿ ನಿವಾಸ ಚಿತ್ರದ ಮೂಲಕ ಜನಪ್ರಿಯವಾಗಿದ್ದು, ಸಾಹಿತ್ಯ. ಚಿ ಉದಯ ಶಂಕರ್ ಬರೆದ ಹಾಡನ್ನ RN ಜಯಗೋಪಾಲ್ ಬರೆದಿದ್ದಾರೆ ಅಂತಾ ತಿರುಚಿ ಕವಿ ಪರಿಚಯ ಮಾಡಲಾಗಿದೆ. ಈ ಪರಿಷ್ಕರಣೆ ಎಡವಟ್ಟು ಇದೀಗ ನಗೆಪಾಟಲಿಗೆ ಎಡೆಮಾಡಿಕೊಟ್ಟಿದೆ.

ಇನ್ನು 6ನೇ ತರಗತಿ ಪಠ್ಯದಲ್ಲಿದ್ದ ತಾಯಿ ಭುವನೇಶ್ವರಿಯ ಕುರಿತಾದ ಪಾಠ ರಾಜ್ಯೋತ್ಸವ ಮೆರವಣಿಗೆ ಪಠ್ಯಕ್ಕೆ ಕೋಕ್ ಕೊಡಲಾಗಿದೆ. ಈ ಪಾಠವನ್ನು ಕೈಬಿಟ್ಟು ಸಿದ್ಧಾರೂಢ ಜಾತ್ರೆ ಪಾಠವನ್ನು ಸೇರಿಸಲಾಗಿದೆ. ಈ ನಿರ್ಧಾರ ಇದೀಗ ಕನ್ನಡಪರ ಹೋರಾಟಗಾರನ್ನ ಕೆರಳಿಸಿ ಬಿಟ್ಟಿದೆ. ನಾಡಿನ ಜನರ ಭಾನೆಗಳ ಜೊತೆ ಚೆಲ್ಲಾಟ ವಾಡಲಾಗ್ತಿದೆ, ರಾಜ್ಯದ ಅಸ್ಮಿತೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಅಣ್ಣಾವ್ರ ಚಿತ್ರದ ಜನಮೆಚ್ಚಿದ ಹಾಡಿನ ಸಾಹಿತಿಗಳ ಬಗ್ಗೆ ತಪ್ಪು ಮಾಹಿತಿಯನ್ನ ಕೊಡುತ್ತಿದ್ದೀರಾ? ನಾಡು, ನುಡಿಯ ಬಗ್ಗೆ ಗೊತ್ತಿಲ್ಲದ ಅವಿವೇಕಿಗಳನ್ನ ಸಮಿತಿಗೆ ನೇಮಿಸಲಾಗಿದೆ ಅಂತ ಕನ್ನಡಪರ ಹೋರಾಟಗಾರರು ಸರ್ಕಾರಕ್ಕೆ ಚೀಮಾರಿ ಹಾಕುತ್ತಿದ್ದಾರೆ.

ಇನ್ನು ದ್ವಿತೀಯ ಪಿಯುಸಿ ಹೊಸ ಧರ್ಮಗಳ ಉದಯ ಪಠ್ಯ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ಅವರ ಸಮಿತಿಯನ್ನ ಮರುನೇಮಕ ಮಾಡಿರೋದಕ್ಕೆ ಭಾರೀ ವಿರೋಧ ವ್ಯಕ್ತವಾಗ್ತಿದೆ. AIDSO ವಿದ್ಯಾರ್ಥಿ ಸಂಘಟನೆಯವರು ಫ್ರಿಡಂ ಪಾರ್ಕ್ ನಲ್ಲಿ ಚಕ್ರತೀರ್ಥ ವಿರುದ್ಧ ಪ್ರತಿಭಟನೆ ನಡೆಸಿದ್ರು. ಶಿಕ್ಷಣ ಇಲಾಖೆ ಹಾಗೂ ಚಕ್ರತೀರ್ಥ ವಿರುದ್ಧ ಘೋಷಣೆ ಕೂಗಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ರು.

ಬಳಿಕ AIDSO ಬೆಂಗಳೂರು ಜಿಲ್ಲಾ ಉಪಾಧ್ಯಕ್ಷೆ ಅಪೂರ್ವ ಮಾತನಾಡಿ ರಾಜಕೀಯಕ್ಕಾಗಿ ಪಠ್ಯ ವನ್ನು ಬಳಕೆ ಮಾಡ್ತಿದ್ದಾರೆ, ಮೊದಲು ಭಗತ್ ಸಿಂಗ್ ಪಾಠಕ್ಕೆ ಕತ್ತರಿ ಹಾಕಿದ್ರು, ಹೋರಾಟಗಳು ನಡೆದ ಮೇಲೆ ಮತ್ತೆ ಸೇರಿಸಿದ್ದಾರೆ. ಐತಿಹಾಸಿಕ ಘಟನೆಗಳನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ, ಅದನ್ನ ನಿಲ್ಲಿಸಿ ಹಳೆಯ ಪುಸ್ತಕವನ್ನೇ ಈ ವರ್ಷ ಕೂಡ ಬಳಕೆ ಮಾಡಬೇಕು. ಈಗ ಪಿಯುಸಿ ಪಠ್ಯಕ್ಕೆ ರೋಹಿತ್ ಚಕ್ರತೀರ್ಥ ಅವರ ಸಮಿತಿಯನ್ನ ನೇಮಕ ಮಾಡಿದ್ದಾರೆ ಈ ನಿರ್ಧಾರವನ್ನ ರದ್ದು ಪಡಿಸಬೇಕು. ಸರ್ಕಾರದ ನಿರ್ಧಾರವನ್ನ ವಿರೋಧಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಮುಂದೆ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗುತ್ತೆ, ನಮ್ಮ ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶಿಕ್ಷಣ ಇಲಾಖೆಯ ಪಠ್ಯ ಪರಿಷ್ಕರಣೆಯ ಸಾಲು ಸಾಲು ಎಡವಟ್ಟುಗಳು ಉರಿಯೋ ಬೆಂಕಿಗೆ ತುಪ್ಪ ಸುರಿಯುತ್ತಿವೆ. ಮತ್ತಿನ್ಯಾವ ಎಡವಟ್ಟು ಬಯಲಾಗುತ್ತೋ ..? ಅದು ಮತ್ಯಾವ ರೂಪ ತಾಳುತ್ತೋ ..? ಒಟ್ಟಾರೆ ಈ ವಿವಾದಗಳ ಮಧ್ಯೆ ಮಕ್ಕಳ ಶೈಕ್ಷಣಿಕ ಜೀವನ ಹಾಳಾಗುತ್ತಿರೋದಂತೂ ಖಂಡಿತಾ.

ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments