ಈ ರಾಜಕೀಯ ಕ್ಷೇತ್ರ ಅನ್ನೋದೇ ಹಾಗೆ.. ಇಲ್ಲಿ ಯಾರೂ ಶತ್ರುಗಳಲ್ಲ.. ಯಾರೂ ಮಿತ್ರರಲ್ಲ .. ಯಾರು ಯಾವಾಗ ಹೇಗೆ ಬೇಕಿದ್ರೂ ಬದಲಾಗ್ತಿರ್ತಾರೆ ಅನ್ನೋದಕ್ಕೆ ಮಂಡ್ಯ ಜಿಲ್ಲೆಯಲ್ಲಿ ನಡೀತಿರೊ ಈ ಇಬ್ಬರು ನಾಯಕರ ಮುಸುಕಿನ ಗುದ್ದಾಟವೇ ಸಾಕ್ಷಿ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಿನ ಸಮಯದಲ್ಲಿ ಒಬ್ಬರಿಗೊಬ್ಬರು ಅಣ್ಣ-ಅಣ್ಣ ಎನ್ನುತ್ತಿದ್ದ ನಾಯಕರು ಈಗ ಒಬ್ಬರ ಮೇಲೆ ಮತ್ತೊಬ್ಬರು ಕತ್ತಿ ಮಸೆಯುತ್ತಿದ್ದಾರೆ.
ಮೂರನೇ ಬಾರಿಗೆ ಕೆಆರ್ ಪೇಟೆಗೆ ಶಾಸಕರಾಗಿರುವ ನಾರಾಯಗೌಡರಿಗೆ ಟಿಕೆಟ್ ಕೊಡಿಸುವಲ್ಲಿ ಮೇಲುಕೋಟೆ ಶಾಸಕ ಪುಟ್ಟರಾಜು ಯಶಸ್ವಿಯಾದರು. ಹೀಗೆ 2018 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಗೆದ್ದಿದ್ದ ನಾರಾಯಣಗೌಡ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆದರು.
ಇದಾದ ನಂತರ ನಾರಾಯಣಗೌಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕಳೆದುಕೊಂಡ ಕೆಲವೇ ದಿನಗಳಲ್ಲಿ ಮೇಲುಕೋಟೆಯ ವೈರಮುಡಿ ಉತ್ಸವ ನಡೆಯುತ್ತಿದ್ದು, ಜಿಲ್ಲಾಡಳಿ ಎಲ್ಲಾ ಸಿದ್ದತೆ ಆರಂಭಿಸಿದೆ.ಅಲ್ಲದೆ ವೈರಮುಡಿ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಹ ಭಾಗವಹಿಸಲಿದ್ದಾರೆ.ಇಂತಹ ಕಾರ್ಯಕ್ರಮಕ್ಕೆ ನಾರಾಯಣಗೌಡರನ್ನ ಶಾಸಕ ಸಿ ಎಸ್ ಪುಟ್ಟರಾಜು ಅವರು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.ಅವರನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಶಾಸಕ ಪುಟ್ಟರಾಜು ಅವರ ವಿರುದ್ದ ಸಚಿವ ನಾರಾಯಣಗೌಡ ಹರಿಹಾಯ್ದಿದ್ದಾರೆ.
ಅಷ್ಟಕ್ಕೂ ಈ ಇಬ್ಬರು ನಾಯಕರ ನಡುವಿನ ಮುಸುಕಿನ ಗುದ್ದಾಟ ಇದೇ ಮೊದಲೇನಲ್ಲ. ಈ ಮೊದಲು ಪುಟ್ಟರಾಜು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಮಯದಲ್ಲಿ ನಾರಾಯಣಗೌಡ ಶಾಸಕರಾಗಿದ್ದರು. ಆಗ ತಮ್ಮ ಕ್ಷೇತ್ರದ ಅಭಿವೃದ್ದಿಗಾಗಿ ಅನುದಾನ ನೀಡುವಂತೆ ಕೇಳಿಕೊಳ್ಳುತ್ತಿದ್ದರು.ಇದಾದ ಕೆಲವೇ ತಿಂಗಳಲ್ಲಿ ರಾಜಕೀಯ ಬದಲಾವಣೆಯಿಂದಾಗಿ ನಾರಾಯಣಗೌಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆಯಾದರೆ ಪುಟ್ಟರಾಜು ಕೇವಲ ಶಾಸಕರಾಗಿದ್ದಾರೆ.ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲಾ ಒಬ್ಬರ ಕಾಲನ್ನ ಮತ್ತೊಬ್ಬರು ಎಳೆದುಕೊಳ್ಳುತ್ತಿರುತ್ತಾರೆ. ಮಂಡ್ಯ ಜಿಲ್ಲೆಯ ಈ ಇಬ್ಬರು ನಾಯರ ಜಂಗೀಕುಸ್ತಿ ಮುಂದೆ ಯಾವ ಹಂತಕ್ಕೆ ಮುಟ್ಟಲಿದೆಯೋ ಕಾದು ನೋಡಬೇಕಿದೆ.
ರವಿ ಲಾಲಿಪಾಳ್ಯ ಪವರ್ ಟಿವಿ ಮಂಡ್ಯ



