ಬೆಳಗಾವಿ: ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿವಾದಿತ ಮತಾಂತರ ನಿಷೇಧ ಕಾಯ್ದೆಯ ವಿಧೇಯಕವನ್ನು ಕಾನೂನು ಸಚಿವ ಮಾಧುಸ್ವಾಮಿ ಮಂಡಿಸಿದರು. ವಿಧೇಯಕಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುವುದರ ಜೊತೆಗೆ, ಸದನದ ಬಾವಿಗಿಳಿದು ತೀವ್ರ ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಾಜಾರೋಷವಾಗಿ ಬಿಲ್ ತನ್ನಿ, ಈ ರೀತಿ ಕದ್ದು ಮುಚ್ಚಿ ಮಾಡಿ ತರಬೇಡಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಇದೇ ಅಧಿವೇಶನದಲ್ಲಿ ಬಿಲ್ ತರುತ್ತೇವೆ ಎಂದು ಹೇಳಿದ್ದೆವು, ಎಲ್ಲೂ ಕದ್ದು ಮುಚ್ಚಿ ನಾವು ಬಿಲ್ ತರುತ್ತಿಲ್ಲಎಂದು ತಿರುಗೇಟು ನೀಡಿದರು.
ಈ ಹಂತದಲ್ಲಿ ಮಾಧುಸ್ವಾಮಿ, ಸಿದ್ದರಾಮಯ್ಯ ನಡುವೆ ವಾಕ್ಸಮರವೆ ನಡೆಯಿತು.
ಇದೊಂದು ಜನವಿರೋಧಿ ಕಾನೂನು, ನಮಗೆ ಮಾಹಿತಿ ನೀಡದೆ ಬಿಲ್ ತರಲಾಗಿದೆ ಎಂದು ಸ್ಪೀಕರ್ ನಡೆಗೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಬಹುಮತ ಇದೆ ಎಂದು ಏನೇನೋ ಮಾಡುವುದಕ್ಕೆ ಆಗಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.



