ಹುಬ್ಬಳ್ಳಿ:ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಗಂಜಿಗಟ್ಟಿ ಗ್ರಾಮದ ಹಿರೇಕೆರೆ ನೀರಿನ ಸೆಳವಿನಲ್ಲಿ ತೇಲಿ ಹೋಗಿದ್ದ, 8 ವರ್ಷದ ಬಾಲಕಿ ಶ್ರೀದೇವಿ ಹನುಮಂತಪ್ಪ ಗಾಣಿಗೇರ ಮೃತ ದೇಹ ಇಂದು ಪತ್ತೆಯಾಗಿದೆ.
ಆಗಸ್ಟ್ 6 ರಂದು ಬಾಲಕಿ ತಂದೆಯ ಜೊತೆ ಹೊಲಕ್ಕೆ ಹೋದಾಗ ಧಾರಾಕಾರ ಮಳೆಯಿಂದಾಗಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಳು.ಎರಡು ದಿನಗಳ ಕಾಲ ನಡೆದ ಶೋಧ ಕಾರ್ಯಾಚರಣೆ ಬಳಿಕ, ತೇಲಿ ಹೋದ ಸ್ಥಳದಿಂದ ಸುಮಾರು ಒಂದೂವರೆ ಕಿ.ಮೀ.ಅಂತರದಲ್ಲಿ ಮೃತದೇಹ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಎನ್ಡಿಆರ್ಎಫ್(NDRF),ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ್ದರು. ಸದ್ಯ ಮೃತ ಬಾಲಕಿಯ ಕುಟುಂಬದ ರೋಧನೆ ಮುಗಿಲು ಮುಟ್ಟಿದೆ.


