ಮೈಸೂರು : ಕೆ.ಆರ್.ನಗರದ ಚಂದಗಾಲ ಗ್ರಾಮದ ಜಮೀನಿನಲ್ಲಿ ಕೋದಂಡರಾಮ ಹಾಗೂ ಸೀತಾಮಾತೆಯ ವಿಗ್ರಹಗಳು ಪತ್ತೆಯಾಗಿದೆ. ಹೊಲ ಉಳುವಾಗ ವಿಗ್ರಹಗಳು ಪತ್ತೆಯಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ ನಡೆದ ಬೆನ್ನ ಹಿಂದೆಯೇ ಕಾಕತಾಳೀಯವೆಂಬಂತೆ ಎರಡೇ ದಿನಕ್ಕೆ ಕೆ.ಆರ್.ನಗರದ ಗ್ರಾಮದ ಭೂಮಿಯಲ್ಲಿ ವಿಗ್ರಹಗಳು ಪತ್ತೆಯಾಗಿದೆ. ಸಿದ್ದೇಗೌಡ ಎಂಬುವರ ಜಮೀನಿನಲ್ಲಿ ಪ್ರಾಚೀನ ಕಾಲದ ವಿಗ್ರಹಗಳು ಪತ್ತೆಯಾಗಿದೆ.
ಟ್ರಾಕ್ಟರ್ ನಲ್ಲಿ ಜಮೀನು ಕೆಲಸ ಮಾಡುವಾಗ ಭೂಮಿಯಲ್ಲಿ ಹುದುಗಿದ್ದ ವಿಗ್ರಹಗಳು ಪತ್ತೆಯಾಗಿದೆ. ಸುಮಾರು ಎರಡು ಅಡಿ ಎತ್ತರದ ವಿಗ್ರಹಗಳು ಮರದಿಂದ ಕೆತ್ತನೆ ಮಾಡಲಾಗಿದೆ. ವಿಗ್ರಹಗಳ ಮೇಲೆ ಬಣ್ಣ ಲೇಪನವಾಗಿದ್ದು ಮಸುಕಾಗಿ ಕಾಣುತ್ತದೆ. ವರ್ಷಗಳ ಕಾಲ ಮಣ್ಣಿನಲ್ಲಿ ಹುದುಗಿದ್ದರೂ ಗೆದ್ದಲು ಹಿಡಿಯದ ಮರದ ವಿಗ್ರಹಗಳು ಅಚ್ಚರಿಗೆ ಕಾರಣವಾಗಿದೆ.
ಸಿದ್ದೇಗೌಡರ ಜಮೀನಿನ ಬಳಿಯಿಂದ ಸುಮಾರು 300 ಮೀಟರ್ ಅಂತರದಲ್ಲಿ ಶ್ರೀರಾಮ ಮಂದಿರ ಇದೆ.ಸುಮಾರು 100 ವರ್ಷಗಳ ಪುರಾತನ ಶ್ರೀರಾಮ ದೇವಾಲಯ ಎಂದು ಹೇಳಲಾಗಿದೆ. ಶ್ರೀರಾಮ ದೇವಾಲಯಕ್ಕೆ ಸಂಬಂಧಿಸಿದ ವಿಗ್ರಹಗಳು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಹಲವಾರು ವರ್ಷಗಳಿಂದ ಕಾಣದಿರುವ ವಿಗ್ರಹಗಳು ಅಯೋಧ್ಯಾ ರಾಮಮಂದಿರ ಶಿಲಾನ್ಯಾಸ ನೆರವೇರಿದ ಸಮಯದಲ್ಲಿ ಕಂಡುಬಂದಿರುವುದು ಗ್ರಾಮಸ್ಥರ ಕುತೂಹಲಕ್ಕೆ ಕಾರಣವಾಗಿದೆ. ವಿಗ್ರಹಗಳು ಪತ್ತೆಯಾದ ವಿಚಾರವನ್ನ ತಹಶೀಲ್ದಾರ್ ಗಮನಕ್ಕೆ ಗ್ರಾಮಸ್ಥರು ಮುಟ್ಟಿಸಿದ್ದಾರೆ.ಪುರಾತತ್ವ ಇಲಾಖೆಗೆ ತಹಶೀಲ್ದಾರ್ರವರು ಮಾಹಿತಿ ನೀಡಿದ್ದಾರೆ.ಪುರಾತತ್ವ ಇಲಾಖೆ ಅಧಿಕಾರಿಗಳ ಆಗಮನಕ್ಕಾಗಿ ಗ್ರಾಮಸ್ಥರು ಕಾದಿದ್ದಾರೆ. ಚಂದಗಾಲ ಗ್ರಾಮದ ಶ್ರೀರಾಮನ ದೇಗುಲದಲ್ಲಿ ವಿಗ್ರಹಗಳನ್ನ ಇರಿಸಿ ಗ್ರಾಮಸ್ಥರು ಪೂಜಿಸುತ್ತಿದ್ದಾರೆ.


