ಶಿವಮೊಗ್ಗ : ಈ ದೇಶದಲ್ಲಿ ಕಾಂಗ್ರೆಸ್ ಬೇಡ ಅಂತ ಜನ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ನಿರ್ನಾಮ ಮಾಡಬೇಕು ಎಂಬ ಉದ್ದೇಶದಿಂದ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿಗಳೆಲ್ಲರೂ ಕೂಡ ಒಟ್ಟಾಗಬೇಕು. ಕಾಂಗ್ರೆಸ್ ಕಿತ್ತೊಗೆಯುವುದೇ ನಮ್ಮ ಉದ್ದೇಶ. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋಗುತ್ತೇವೆ ಎಂದು ಗುಡುಗಿದರು.
ಲೋಕಸಭಾ ಚುನಾವಣೆ, ತಾ.ಪಂ, ಗ್ರಾ.ಪಂ ಚುನಾವಣೆಯಂತಲ್ಲ. ಲೋಕಸಭಾ ಚುನಾವಣೆ ಅಂದ್ರೇ ದೇಶವನ್ನು ಉಳಿಸುವ ಚುನಾವಣೆ. ಬಿಜೆಪಿ-ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿ, ಯಶಸ್ಸು ಗಳಿಸುತ್ತೇವೆ. ಈ ಹಿಂದೆ ಕಾಂಗ್ರೆಸ್ ವಿರೋಧಿ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಲಾಭ ಗಳಿಸಿತ್ತು. ಜೊತೆಗೆ ಕಳೆದ ಚುನಾವಣೆ ವೇಳೆ ರಾಜ್ಯದಲ್ಲಿ ಒಂದು ಸ್ಥಾನ ಸಹ ಗೆದ್ದಿತ್ತು. ಈ ಬಾರಿ ಒಂದು ಸ್ಥಾನ ಕಾಂಗ್ರೆಸ್ಗೆ ಕೊಡಬಾರದು ಅಂತ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ಬಿಜೆಪಿಗೆ ಯಾವುದೇ ಭಯವಿಲ್ಲ
ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ. ಒಂದು ಸೀಟನ್ನೂ ಕಾಂಗ್ರೆಸ್ಗೆ ಕೊಡಬಾರದು ಎಂಬುದು ರಾಜ್ಯದ ಜನರ ಅಪೇಕ್ಷೆ. ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಬಿಜೆಪಿ ಎರಡು ಸೀಟು ಕೂಡ ಬರಲ್ಲ ಅಂದಿದ್ರು. ಕಾಂಗ್ರೆಸ್ಗೆ ಒಂದೇ ಸೀಟು ಬಂದಿತ್ತು, ಬಿಜೆಪಿ 25 ಸೀಟು ಗೆದ್ದಿತ್ತು. ಕಾಂಗ್ರೆಸ್ ವ್ಯಕ್ತಿಗತ ಯೋಚನೆ ಮಾಡುತ್ತೆ. ನಾವು ದೇಶಕ್ಕಾಗಿ ಯೋಚನೆ ಮಾಡ್ತೇವೆ. ಬಿಜೆಪಿಗೆ ಯಾವುದೇ ಭಯವಿಲ್ಲ. ಚುನಾವಣೆ ನಂತರ ಉತ್ತರ ಸಿಗುತ್ತೆ ಎಂದು ಈಶ್ವರಪ್ಪ ಹೇಳಿದರು.


