ಬೆಂಗಳೂರು : ರಾಜ್ಯದ 6 ಕೋಟಿ ಜನರ ತಲೆ ಮೇಲೆ ಚೆಂಡು ಹೂ ಇಡುವ ಬಜೆಟ್ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕುಟುಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಬಜೆಟ್ ನ ಮುಂದುವರಿದ ಭಾಗ ಇದು ಎಂದು ಛೇಡಿಸಿದರು.
ಪ್ರತಿಯೊಂದಕ್ಕೂ ಹಿಂದಿನ ಸರ್ಕಾರ ಅಂತ ಹೇಳ್ತಿದ್ದಾರೆ. 1994 ರಿಂದಲೂ ಅವರ ಬಜೆಟ್ ಅನ್ನೇ ಓದುತ್ತಿದ್ದೇನೆ. 13 ಬಜೆಟ್ ನಲ್ಲಿ ಏನೆಲ್ಲಾ ಕೊಟ್ಟಿದ್ದಾರೆ ಅಂತ ಓದುತ್ತಿದ್ದೇನೆ. ಬಜೆಟ್ ನಲ್ಲಿ ಸದ್ಯ ಇಲ್ಲಿರೋ ಕಾರ್ಯಕ್ರಮಗಳನ್ನೇ ಕೊಟ್ಟಿದ್ದಾರೆ. 4ರಿಂದ 5 ಕಾರ್ಯಕ್ರಮ ಹೆಚ್ಚಾಗಿದೆ ಅಷ್ಟೇ. ದುಡಿಯುವ ಕೈಗೆ, ಸ್ವಾವಲಂಬಿ ಬದುಕಿಗೆ ಏನಿದೆ ನಿಮ್ಮ ಬಜೆಟ್ ನಲ್ಲಿ ಎಂದು ಗುಡುಗಿದರು.
ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಆದ್ಯತೆ
ಈ ಬಜೆಟ್ ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ರಾತ್ರಿ ಕಂಡ ಕನಸೋ ಇಲ್ಲವೇ, ಹಗಲು ಕಂಡ ಕನಸೋ. ಈ ಬಜೆಟ್ ಹಿಂದಿನ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರವನ್ನು ದೂಷಣೆ ಮಾಡೋ ಬಜೆಟ್ ಅಷ್ಟೇ. ಈ ಬಜೆಟ್ ನಲ್ಲಿ ಏನೂ ಇಲ್ಲ, ನಿರಾಶಾದಾಯಕ ಬಜೆಟ್. 85 ಸಾವಿರ ಕೋಟಿ ಸಾಲ ಏಕೆ ಮಾಡ್ತಿದ್ದೀರಾ? ಇಲಾಖಾವಾರು ಹಿಂದಿನ ಸರ್ಕಾರ ಇಟ್ಟಿದ್ದ ಅನುಧಾನದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿದ್ದಾರೆ. ನಿಲ್ಲಿಸಿದ್ದ ಕೆಲವು ಕಾರ್ಯಕ್ರಮ ಮುಂದುವರೆಸಿದ್ದಾರೆ, ಅದೇನು ಹೊಸದಲ್ಲ ಎಂದು ಚಾಟಿ ಬೀಸಿದರು.
ಇದನ್ನೂ ಓದಿ : ಹೆಚ್ಡಿಕೆ ನೋಡಿ ನಗಬೇಕೋ, ಅಳಬೇಕೋ ಗೊತ್ತಿಲ್ಲ : ಮತ್ತೆ ಪಂಚ್ ಕೊಟ್ಟ ಚಲುವರಾಯಸ್ವಾಮಿ
ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ಇಲ್ಲ
ಆ ಯೋಜನೆಗಳಿಗೆ 50 ಸಾವಿರ ಖರ್ಚು ಆಗಬಹುದೇನೋ. ಇನ್ನುಳಿದ ಹಣ ಏನಾಗುತ್ತೆ? ಎಲ್ಲಿ ಹೋಗುತ್ತೆ? ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಕೊಡಬೇಕಿತ್ತು, ಅದರಲ್ಲಿ ಎಡವಿದ್ದಾರೆ. ನಾಡಿನ ಜನತೆಯ ಬಹು ನಿರೀಕ್ಷಿತ ಆಶೋತ್ತರದ ಸರ್ಕಾರ ಮುಂದಿನ 8 ತಿಂಗಳಿಗೆ ಆರ್ಥಿಕ ಹಂಚಿಕೆಗಳ ಬಜೆಟ್ ಮಂಡಿಸಿದೆ ಎಂದರು.
ನಮ್ಮ ರಾಜ್ಯದ ಆರ್ಥಿಕ ಸಚಿವರ ದಾಖಲೆಯ ಬಜೆಟ್ ಮಂಡನೆ ಇದು. ನಾಡಿನ ಜನತೆ ಅತ್ಯಂತ ನಿರೀಕ್ಷೆ ಇಟ್ಟಿದ್ರು, ಈ ಬಜೆಟ್ ಸಂಪೂರ್ಣ ಚಿತ್ರಣ ನೋಡಿದ್ರೆ, ಈ ಬಜೆಟ್ ಪುಸ್ತಕದ ಮೂಲಕ ಕೇಂದ್ರ ಸರ್ಕಾರ, ಹಿಂದಿನ ಸರ್ಕಾರಗಳ ವಿನಾಯ್ತಿ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.


