ಕಾರವಾರ: ಸೂಕ್ತ ರಸ್ತೆಯಿಲ್ಲದ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದ ಮಹಿಳೆಯೋರ್ವಳನ್ನು 8 ಕಿ.ಮೀ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಕರುಣಾಜನಕ ಘಟನೆ ಉತ್ತಕನ್ನಡ ಜಿಲ್ಲೆಯ ಕಾರವಾರ ನಗರ ವ್ಯಾಪ್ತಿಯಲ್ಲಿ ನಡೆದಿದೆ.
ಕಾರವಾರ ನಗರಸಭೆ ವ್ಯಾಪ್ತಿಯ ಗುಡ್ಡೆಹಳ್ಳಿ ಎಂಬ ಗ್ರಾಮಕ್ಕೆ ಸೂಕ್ತ ರಸ್ತೆಯಿಲ್ಲ. ಗುಡ್ಡದ ತುದಿಯಲ್ಲಿರುವ ಗ್ರಾಮಕ್ಕೆ ಕಚ್ಚಾ ರಸ್ತೆ ಇದ್ದು ಅದು ಕೂಡ ಮಳೆಗಾಲದಲ್ಲಿ ಸಂಪೂರ್ಣ ಹಾಳಾಗಿ ಓಡಾಡುವುದಕ್ಕು ಸಾಧ್ಯವಾಗದ ಪರಿಸ್ಥಿತಿ ಇದೆ. ಗ್ರಾಮದ ಮಹಿಳೆಯೋರ್ವರು ಅನಾರೋಗ್ಯಕ್ಕೀಡಾಗಿದ್ದು, ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಾದ ಪರಿಸ್ಥಿತಿ ಇತ್ತು. ಆದರೆ ಯಾವುದೇ ವಾಹನಗಳು ಓಡಾಡದ ಕಾರಣ ಸ್ಥಳೀಯರೇ ದೊಣ್ಣೆಗೆ ಸೀರೆ ಜೋಲಿಯೊಂದನ್ನು ಸಿದ್ದಪಡಿಸಿ 7 ಜನ ಸೇರಿ ಮಹಿಳೆಯನ್ನು ಕಡಿದಾದ ದಾರಿಯಲ್ಲಿ ಹೊತ್ತುಕೊಂಡು ಬಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಕೇವಲ ಹತ್ತು ನಿಮಿಷದಲ್ಲಿ ಆಸ್ಪತ್ರೆ ಸೇರಬೇಕಿದ್ದವರನ್ನು ರಸ್ತೆ ಇಲ್ಲದ ಕಾರಣಕ್ಕೆ ಮೂರು ಗಂಟೆ ವಿಳಂಬವಾಗಿ ಆಸ್ಪತ್ರೆ ತಲುಪುವಂತಾಯಿತು. ಅದೃಷ್ಟವಶಾತ್ ಮಹಿಳೆಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಈ ಗ್ರಾಮವೂ ನಗರ ಪ್ರದೇಶ ವ್ಯಾಪ್ತಿಯಲ್ಲಿಯೇ ಇದ್ದರೂ ಕೂಡ ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.