Site icon PowerTV

ವಿಶ್ವ ರಕ್ತದೊತ್ತಡ ದಿನ: ಆರೋಗ್ಯ ಕಾಪಾಡಲು ರಾಜೀವ್‌ಗಾಂಧಿ ವಿವಿಯಿಂದ ಜಾಗೃತಿ ಕಾರ್ಯಕ್ರಮ

ಬೆಂಗಳೂರು: ಯೂನಿವರ್ಸಿಟಿ ಹೆಲ್ತ್ ಪೋಗ್ರಾಂ ಅಡಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ರಾಜ್ಯದ ಗ್ರಾಮೀಣ ಭಾಗದಲ್ಲಿ ಜನರ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಮೂಡಿಸಲು ಕುಟುಂಬಗಳನ್ನು ದತ್ತು ಪಡೆಯುವ ಕಾರ್ಯಕ್ರಮ ಜಾರಿಗೊಳಿಸುತ್ತಿದೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಅವರು ತಿಳಿಸಿದರು.

ವಿಶ್ವ ರಕ್ತದೊತ್ತಡ ದಿನ ಅಂಗವಾಗಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಜನರ ಮನೆ ಬಾಗಿಲಿನಲ್ಲಿ ಜನರ ಆರೋಗ್ಯ ತಪಾಸಣೆ ಮಾಡುವ, ಜಾಗೃತಿ ಮೂಡಿಸುವ ಕುಟುಂಬ ದತ್ತು ಕಾರ್ಯಕ್ರಮವನ್ನು ಘೋಷಣೆ ಮಾಡಿತು. ಈ ಕಾರ್ಯಕ್ರಮದ ಉದ್ದೇಶ ಕರ್ನಾಟಕದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವುದು ಮತ್ತು ಆರೋಗ್ಯ ಜಾಗೃತಿ ಮೂಡಿಸುವ ವಿಶ್ವ ವಿದ್ಯಾಲಯದ ಆರೋಗ್ಯ ಕಾರ್ಯಕ್ರಮ ಅಡಿಯಲ್ಲಿ ಕಾರ್ಯಗತಗೊಳಿಸುತ್ತಿದ್ದು, ಈ ಮಹತ್ವದ ಯೋಜನೆಯನ್ನು ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಘೋಷಿಸಿದರು. ಇದನ್ನೂ ಓದಿ :ಪಾಕ್​ಗೆ IMF ನೀಡುವ ಹಣಕಾಸು ನೆರವು ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿದಂತಿದೆ: ರಾಜನಾಥ್​ ಸಿಂಗ್

ವಿಶ್ವ ರಕ್ತದೊತ್ತಡ ದಿನ ಅಂಗವಾಗಿ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್‌ ಮೆಡಿಕಲ್ ಸೈನ್ಸ್‌ , ರಾಜೀವ್‌ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ, ಜಯದೇವ ಹೃದ್ರೋಗ ಸಂಸ್ಥೆ ಮತ್ತು ಇನ್‌ಸ್ಟಿಟ್ಯೂಟ್‌ ಆಫ್ ಪಾಲಿಸಿ ರಿಸರ್ಚ್‌ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯವು ರಾಷ್ಟ್ರೀಯ ಆಯೋಗ ಮತ್ತು ಪ್ರಿವೆಂಟೀವ್ ಮತ್ತು ಕಮ್ಯುನಿಟಿ ಮೆಡಿಸಿನ್‌ ಇಲಾಖೆಯಿಂದ ಗ್ರಾಮೀಣ ಭಾಗದಲ್ಲಿ ಕುಟುಂಬಗಳನ್ನು ಆರೋಗ್ಯ ದತ್ತು ತೆಗೆದುಕೊಳ್ಳುತ್ತಿರುವ ಕಾರ್ಯಕ್ರಮ ಜಾರಿಗೊಳಿಸುತ್ತಿದ್ದೇವೆ. ಈ ಕಾರ್ಯಕ್ರಮದಡಿ ನಮ್ಮ ವಿವಿ ಅಡಿಯಲ್ಲಿ ಬರುವ ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರೊಫೇಸರ್ ಗಳು ಪ್ರತಿಯೊಬ್ಬರೂ ಕನಿಷ್ಠ 8 ರಿಂದ 9 ಜನರ ಆರೋಗ್ಯ ತಪಾಸಣೆ ನಡೆಸಿ ಅವರಿಗೆ ವೈದ್ಯಕೀಯ ಸಲಹೆ ನೀಡಲಿದ್ದಾರೆ. ಹೈಪರ್‌ ಟೆನ್ಷನ್, ಮಧುಮೇಹ, ಅಪೌಷ್ಠಿಕತೆ ಗೆ ಬಗ್ಗೆ ಒತ್ತು ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಮತ್ತಷ್ಟು ಬಲಪಡಿಸಿ ಹೆಚ್ಚು ಜನರಿಗೆ ತಲುಪುವಂತೆ ಮಾಡಲಿದ್ದೇವೆ. ರಾಜೀವ್‌ ಗಾಂಧಿ ವಿವಿ ವ್ಯಾಪ್ತಿಯಲ್ಲಿ 1400 ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳಿದ್ದು, ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸುವಂತೆ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ :ಕೋವಿಡ್​ ಹೊಸ ಅಲೆ ಆರಂಭ: ಹಾಂಗ್​ಕಾಂಗ್​, ಸಿಂಗಪೂರದಲ್ಲಿ ಕೋವಿಡ್​ ಪ್ರಕರಣ ಹೆಚ್ಚಳ

ಇಂದು ಯುವಕಲ್ಲಿ ಹೆಚ್ಚು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹದಿನೆಂಟು ವರ್ಷ ವಯೋಮಾನದಿಂದಲೇ ಯುವಕರಲ್ಲಿ ಕಾಯಿಲೆ ಗುರುತಿಸಿ ಮುಂಜಾಗ್ರತೆ ವಹಿಸಬೇಕಿದೆ. ಯುವ ಸಮುದಾಯವೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವುದು ಎಚ್ಚರಿಕೆ ಗಂಟೆ. ಜೀವನ ಶೈಲಿ ಬದಲಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ವಿವಿಯಿಂದ ಜನರಿಗೆ ಜಾಗೃತಿ ಮೂಡಿಸಲು ಸ್ಟುಡಿಯೋ ಸ್ಥಾಪಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್‌. ರವೀಂದ್ರನಾಥ್ ಮಾತನಾಡಿ, ‘ಹೃದಯ ಸಂಬಂಧಿ ಸಾವುಗಳ ಪೈಕಿ ಶೇ. 30 ರಷ್ಟು ಸಾವುಗಳು ಅಧಿಕ ರಕ್ತದೊತ್ತಡದಿಂದ ಸಂಭವಿಸುತ್ತಿವೆ. ಗ್ರಾಮೀಣ ಭಾಗದಲ್ಲಿ ಈ ಹಿಂದೆ ರಕ್ತದೊತ್ತಡಕ್ಕೆ ಒಳಗಾದವರ ಸಂಖ್ಯೆ ಕಡಿಮೆ ಇತ್ತು. ಈಗ ನಗರಗಳಷ್ಟೇ ಹೆಚ್ಚಳವಾಗಿದೆ. ವಿಶ್ವದಲ್ಲಿ 1.5 ಬಿಲಿಯನ್ ಮಂದಿ ಹೈಪರ್ ಟೆನ್ಷನ್ ನಿಂದ ಬಳಲುತ್ತಿದ್ದಾರೆ. ವಿಶ್ವ ಮಟ್ಟದಲ್ಲಿ ಮೃತರ ಪ್ರಮಾಣಕ್ಕಿಂತಲೂ ಭಾರತದಲ್ಲಿ ದುಪ್ಪಟ್ಟು ಇದೆ. ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಂದ ದೂರ ಉಳಿಯಲು ಜೀವನ ಶೈಲಿ ಮತ್ತು ಆಹಾರ ಶೈಲಿ ಬದಲಿಸಿಕೊಳ್ಳಬೇಕು. ಕುಟುಂಬ ದತ್ತು ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಸಲಹೆ ನೀಡಿದರು.

ಇದನ್ನೂ ಓದಿ :ಮೋದಿ ಹೇಳಿದ್ದೆಲ್ಲಾ ವೇದವಾಕ್ಯವಲ್ಲ, ಇಡೀ ದೇಶದಲ್ಲೇ ಮೋದಿ ದೊಡ್ಡ ಸುಳ್ಳುಗಾರ: ದಿನೇಶ್​ ಗುಂಡುರಾವ್

ಗ್ಲೋಬಲ್‌ ಹೆಲ್ತ್ ಅಡ್ವೋಕೆಸಿ ಇನ್‌ಕ್ಯೂಬಿಟರ್ ನ ಡಾ. ಓಂ ಪ್ರಕಾಶ್‌ ಬೇರ ಮಾತನಾಡಿ, ಸ್ಟ್ರೋಕ್, ಹೃದಯಾಘಾತದ ನಾಲ್ಕು ಸಾವಿನಲ್ಲಿ ಒಂದು ಸಾವು ಯುವಕರಿಗೆ ಸಂಬಂಧಿಸಿದೆ. ಕರ್ನಾಟಕದಲ್ಲಿ ರಕ್ತದೊತ್ತಡ, ಮಧುಮೇಹ ನಿಯಂತ್ರಣ ಮತ್ತು ಜಾಗೃತಿಗಾಗಿ ಕುಟುಂಬ ದತ್ತು ಕಾರ್ಯಕ್ರಮ ಜಾರಿಗೊಳಿಸುತ್ತಿರುವುದು ಭಾರತಕ್ಕೆ ಮಾದರಿಯಾಗಿದೆ. ಈ ಕಾರ್ಯಯೋಜನೆ ಯಶಸ್ಸು ಭಾರತದಲ್ಲಿಕುಟುಂಬ ಕಲ್ಯಾಣ ಕಾರ್ಯಕ್ರಮ ರೂಪಿಸಲು ಮಾದರಿಯಾಗಬಲ್ಲದು. ಯೂನಿವರ್ಸಿಟಿ ಹೆಲ್ತ್ ಪೋಗ್ರಾಂ ಅಡಿಯಲ್ಲಿ ಹದಿನೈದು ವರ್ಷದಿಂದಲೇ ರಕ್ತದೊತ್ತಡ ತಪಾಸಣೆ ಮಾಡಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಕ್ಯಾನ್ಸರ್ ತಜ್ಞ ಡಾ. ಯು.ಎಸ್. ವಿಶಾಲ್‌ರಾವ್‌ ಮಾತನಾಡಿ, ತಂಬಾಕು ನಿಯಂತ್ರಣದಲ್ಲಿ ಜಗತ್ತಿಗೆ ಕರ್ನಾಟಕ ಮಾದರಿ ಎನಿಸಿ ವಿಶ್ವ ದರ್ಜೆ ಪ್ರಶಸ್ತಿ ಪಡೆದಿದೆ. ಶೇ. 7 ರಷ್ಟು ತಂಬಾಕು ಸೇವನೆ ನಿಯಂತ್ರಣ ಸಾಧನೆ ಮಾಡಿರುವುದು ವಿಶ್ವದಲ್ಲಿ ಕರ್ನಾಟಕ ಮಾತ್ರ. ಇದನ್ನು ಪರಿಗಣಿಸಿ ವಿಶ್ವ ಸಂಸ್ಥೆಯೇ ರಾಜ್ಯವನ್ನು ಪ್ರಶಂಸೆ ಮಾಡಿದೆ. ಇದೇ ರೀತಿಯಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕಾಗಿ ಶ್ರಮಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿವಿಯ ಉಪ ಕುಲಪತಿ ಡಾ. ರಿಯಾಜ್ ಬಾಷಾ, ಎನ್ ಎಸ್‌ಎಸ್ ಘಟಕದ ಮುಖ್ಯಸ್ಥರಾದ ವಸಂತ್ ಶೆಟ್ಟಿ, ಇನ್‌ಸ್ಟಿಟ್ಯೂಟ್‌ ಫಾರ್‌ ಪಾಲಿಸಿ ನಿರ್ದೇಶಕ ರಿಸರ್ಚ್‌ ಅಮಿತ್‌ ಕರ್ಣಿಕ ಮತ್ತಿತರರು ಪಾಲ್ಗೊಂಡಿದ್ದರು. ಈ ವರ್ಷ “ನಿಖರವಾಗಿ ನಿಮ್ಮ ರಕ್ತದೊತ್ತಡ ಅಳೆಯಿರಿ, ಅದನ್ನು ನಿಯಂತ್ರಿಸಿ, ಹೆಚ್ಚು ಕಾಲ ಬಾಳಿರಿ” ಎಂಬ ವಿಶ್ವ ರಕ್ತದೊತ್ತಡ ದಿನ 2025ರ ಥೀಮ್‌ಗೆ ಅನುಗುಣವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Exit mobile version