Site icon PowerTV

ರಾಜ್ಯದಲ್ಲಿಯು ರೈಲು ಹಳಿ ತಪ್ಪಿಸಲು ಯತ್ನ: ರೈಲ್ವೆ ಹಳಿ ಮೇಲೆ ಕಲ್ಲುಗಳನ್ನು ಜೋಡಿಸಿಟ್ಟ ಉಗ್ರರು

ಮಂಗಳೂರು : ದೇಶದಲ್ಲಿ ರೈಲು ಹಳಿ ತಪ್ಪಿಸಿ ವಿಧ್ವಂಸಕ ಕೃತ್ಯ ಎಸಗುವುದಕ್ಕೆ ಉಗ್ರರು ಭಾರೀ ಸಂಚು ಹಾಕಿದ್ದಾರೆ. ಈ ಬಗ್ಗೆ ಪಾಕಿಸ್ತಾನದ ಉಗ್ರನೊಬ್ಬ ಬಹಿರಂಗವಾಗಿಯೇ ಹೇಳಿಕೆಯನ್ನೂ ನೀಡಿದ್ದ. ಇದರ ಬೆನ್ನಲ್ಲೇ ಮಂಗಳೂರಿನಲ್ಲಿ ಹಳಿ ತಪ್ಪಿಸಿ ರೈಲನ್ನು ಪತನಗೊಳಿಸಲು ಸಂಚು ಹೆಣೆದಿರುವ ಅಂಶ ಬಯಲಾಗಿದೆ.

ಹೌದು..ಮಂಗಳೂರು ನಗರ ಹೊರವಲಯದ ಉಳ್ಳಾಲದ ತೊಕ್ಕೊಟ್ಟಿನಲ್ಲಿ ರೈಲು ಉರುಳಿಸಲು ಸಂಚು ಹೆಣೆದಿರುವ ಅಂಶ ಬಯಲಾಗಿದೆ. ರೈಲಿನ ಹಳಿಯ ಮೇಲೆ ಕಲ್ಲುಗಳನ್ನಿಟ್ಟು ಕೇರಳಕ್ಕೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲನ್ನು ಬೀಳಿಸುವ ಪ್ರಯತ್ನ ನಡೆದಿರುವುದು ಪತ್ತೆಯಾಗಿದೆ.

ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ರೈಲು ಸಾಗುತ್ತಿದ್ದಾಗ, ಏನೋ ಅಸಹಜ ಸದ್ದು ಕೇಳಿಸಿತ್ತು. ಈ ಹಿಂದೆ ಕೇಳಿರದ ಸದ್ದು ಎನ್ನುವುದನ್ನು ಮನಗಂಡ ಸ್ಥಳೀಯರು ರೈಲು ತೆರಳುತ್ತಲ್ಲೇ ಅಲ್ಲಿಗೆ ಧಾವಿಸಿ ನೋಡಿದ್ದಾರೆ. ಈ ವೇಳೆ, ರೈಲು ಹಳಿಯಲ್ಲಿ ಕಲ್ಲುಗಳನ್ನಿಟ್ಟಿರುವುದು ಮತ್ತು ಅದು ಪುಡಿಯಾಗಿರುವುದು ಕಂಡುಬಂದಿದೆ. ಅಲ್ಲದೆ, ಸ್ಥಳದಲ್ಲಿ ಯಾರೋ ಅಪರಿಚಿತರು ಓಡಾಟ ನಡೆಸಿದ್ದಾರೆ ಎನ್ನುವ ವಿಷಯವೂ ಸ್ಥಳೀಯರು ಹೇಳತೊಡಗಿದ್ದಾರೆ. ಕೂಡಲೇ ಉಳ್ಳಾಲ ಮತ್ತು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಇತ್ತೀಚೆಗೆ ಪಾಕಿಸ್ತಾನದ ಉಗ್ರ ಫರ್ಹಾತುಲ್ಲಾ ಘೋರಿ ಎನ್ನುವಾತ ಭಾರತದಲ್ಲಿ ದೇಶಾದ್ಯಂತ ರೈಲು ಹಳಿ ತಪ್ಪಿಸುವ ಕೆಲಸ ಮಾಡುತ್ತೇವೆ, ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ಎಸಗುತ್ತೇವೆಂದು ಬಹಿರಂಗ ಹೇಳಿಕೆ ನೀಡಿದ್ದ. ಇದರ ಬೆನ್ನಲ್ಲೇ ಉಳ್ಳಾಲದಲ್ಲಿ ಹಳಿ ತಪ್ಪಿಸುವ ಸಂಚು ನಡೆದಿರುವುದು ಏನೋ ಒಂದಕ್ಕೊಂದು ಲಿಂಕ್ ಇದೆಯಾ ಎನ್ನುವ ಜಿಜ್ಞಾಸೆ ಮೂಡಿಸಿದೆ. ಒಟ್ಟಿನಲ್ಲಿ ಈ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕವನ್ನಂತೂ ಮೂಡಿಸಿದೆ.

Exit mobile version