Site icon PowerTV

ಮೋದಿ, ಅಮಿತ್ ಶಾಗೆ ಇದು ಒಂದು ಕಸುಬು : ವಿಜಯಾನಂದ ಕಾಶಪ್ಪನವರ್

ಕಲಬುರಗಿ : ಕಾಂಗ್ರೆಸ್‌ನ ಅಕೌಂಟ್‌ಗಳ ಸೀಜ್ ವಿಚಾರಕ್ಕೆ ಶಾಸಕ ಹಾಗೂ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ ಬಿಜೆಪಿ ವಿರುದ್ಧ ಕಿಡಿಕಾರಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಲಾಗದವರು ಮೈ ಎಲ್ಲಾ ಪರಚಿಕೊಂಡರು ಎನ್ನುವ ಗಾದೆ ಮಾತು ಇದೆ. ಚುನಾವಣೆ ಯಾವಾಗ ಬರುತ್ತೆ, ಬಿಜೆಪಿಯವರು ಈ ಒಂದು ರಾಗ ತೆಗೆಯುತ್ತಾರೆ ಎಂದು ಕುಟುಕಿದರು.

ಸಿಬಿಐ, ಇಡಿ ದಾಳಿ ಮಾಡಿಸುವುದು ಬಿಜೆಪಿಯ ಹುಟ್ಟು ಗುಣ. ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಇದು ಒಂದು ಕಸುಬು ಆಗಿದೆ. ಚುನಾವಣೆ ಬರುತ್ತಿದ್ದಂಗೆ ಇವು ಪ್ರಾರಂಭ ಆಗುತ್ತವೆ. ‌ಇದು ಬ್ಲಾಕ್ ಮೇಲ್ ತಂತ್ರ. ಪ್ರಾಮಾಣಿಕವಾಗಿ, ಸ್ವಂತ ಶಕ್ತಿ, ಅಭಿವೃದ್ಧಿ ಮೇಲೆ ದೇಶದಲ್ಲಿ ಗೆಲ್ಲುತ್ತೇವೆ ಅಂತ ಅವರಿಗೆ ಗ್ಯಾರಂಟಿ ಇಲ್ಲ ಎಂದು ಚಾಟಿ ಬೀಸಿದರು.

ನಾವೂ ರಾಮನ ಭಕ್ತರೇ, ಜೈ ಶ್ರೀರಾಮ್ ಅಂತಿವಿ

ರಾಮಮಂದಿರ ಉದ್ಘಾಟನೆ ಮಾಡಿದಾಕ್ಷಣ ಗೆಲ್ಲೋಕಾಗುತ್ತಾ? ರಾಮ ಮಂದಿರವನ್ನು ನಾವು ಯಾರೂ ಬೇಡ ಅಂದಿಲ್ಲ, ನಾವೂ ಜೈ ಶ್ರೀರಾಮ್ ಅಂತಿವಿ. ನಾವೂ ರಾಮನ ಭಕ್ತರೇ.. ರಾಜಕೀಯಕ್ಕಾಗಿ ರಾಮಮಂದಿರ ಬಳಕೆ, ಹೆದರಿಕೆ, ಬೆದರಿಕೆ ಹಾಕೋದು, ಅಕೌಂಟ್ ಸೀಜ್ ಮಾಡೋದು ಇವೆಲ್ಲಾ ಬಿಜೆಪಿಯವರ ಇವರ ಹುಟ್ಟು ಗುಣ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ನವರು ಹೇಡಿ ರಾಜಕೀಯ ಮಾಡಲ್ಲ

ಬಿಜೆಪಿಯವರಿಗೆ ಸ್ವಂತ ತಾಕತ್ತಿಲ್ಲ ಅಂತ ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದು ಹೇಡಿ ರಾಜಕೀಯ ಅಂತ ಭಾವಿಸುತ್ತೇನೆ, ಕಾಂಗ್ರೆಸ್​ನವರು ಹೇಡಿ ರಾಜಕೀಯ ಮಾಡಲ್ಲ. ಎಷ್ಟೇ ಗೊಡ್ಡು ಬೆದರಿಕೆ ಹಾಕಿದ್ರು ಕಾಂಗ್ರೆಸ್ ಹೆದರಲ್ಲ. ಕಾಂಗ್ರೆಸ್​ಗೆ ಅದರದೇ ಆದ ಸಿದ್ಧಾಂತ ಇದೆ, ಅದರ ಮೇಲೆ ನಡೆಯುತ್ತೇವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್‌ ಹೇಳಿದರು.

Exit mobile version