Site icon PowerTV

ಘಾಟಿ ಸುಬ್ರಹ್ಮಣ್ಯದಲ್ಲಿ ಕುಮಾರ ಷಷ್ಠಿ ಸಂಭ್ರಮ, ವಿಶೇಷ ಪೂಜೆ ಸಲ್ಲಿಸಿದ ‘ಸಿಂಹಪ್ರಿಯಾ’ ಜೋಡಿ

ಬೆಂಗಳೂರು ಗ್ರಾಮಾಂತರ : ಇಂದು ಎಲ್ಲೆಡೆ ಶುಕ್ಲ ಶುದ್ಧ ಕುಮಾರ ಷಷ್ಠಿಯ ಸಂಭ್ರಮ ಮನೆ ಮಾಡಿತ್ತು. ಮುಂಜಾನೆಯಿಂದಲೇ ದೇವಸ್ಥಾನಗಳತ್ತ ಭಕ್ತರು ದೌಡಾಯಿಸಿದರು.

ಕುಮಾರ ಷಷ್ಠಿ ಹಿನ್ನಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಭಕ್ತರ ದಂಡೇ ನೆರೆದಿತ್ತು. ಬೆಳಗಿನಿಂದಲೇ ಭಕ್ತರು ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಸುಬ್ರಹ್ಮಣ್ಯನ ದರ್ಶನ ಪಡೆದು ಪುನೀತರಾದರು.

ಇನ್ನು ಕುಮಾರ ಷಷ್ಠಿ ಹಿನ್ನೆಲೆ ಸುಬ್ರಹ್ಮಣ್ಯ ಸ್ವಾಮಿಗೆ ಬೆಳಗ್ಗೆಯೇ ಅಭಿಷೇಕ ನೇರವೇರಿಸಲಾಯಿತು. ನರಸಿಂಹಸ್ವಾಮಿ ಸಮೇತ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ದೇವರ ದರ್ಶನ ಪಡೆದ ಭಕ್ತರು ದೇವಾಲಯ ಪಕ್ಕದ ನಾಗರ ಕಲ್ಲುಗಳಿಗೆ ಹಾಲೆರೆದು ಭಕ್ತಿ ಸಮರ್ಪಿಸಿದರು. ನಟ ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಆಡಳಿತ ಮಂಡಳಿಯಿಂದ ಪ್ರಸಾದ ವ್ಯವಸ್ಥೆ

ಶ್ರೀ ಸುಬ್ರಹ್ಮಣ್ಯ ಸ್ವಾಮಿ ಜನ್ಮದಿನಾಚರಣೆ ಅಂಗವಾಗಿ ರಾಜ್ಯದ ಇತರೆ ದೇವಾಲಯಗಳಲ್ಲಿಯೂ ಕುಮಾರ ಷಷ್ಠಿ ನಡೆದಿದೆ. ಇನ್ನು ಘಾಟಿಗೆ ಬಂದ ಭಕ್ತಾದಿಗಳಿಗೆ ದೇವಾಲಯ ಆಡಳಿತ ಮಂಡಳಿ ವತಿಯಿಂದ  ಊಟದ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ಇತರೆ ಪುಣ್ಯ ಕ್ಷೇತ್ರಗಳಲ್ಲಿಯೂ ಧಾರ್ಮಿಕ ಕಾರ್ಯಗಳು, ಭಕ್ತಾದಿಗಳು ದೇವರ ದರ್ಶನ ಪಡೆದು ಸಂತಸಪಟ್ಟರು.

Exit mobile version