Site icon PowerTV

ಸರ್ಕಾರದ ನಿಯಂತ್ರಣದಲ್ಲಿರುವ ದೇವಾಲಯಗಳ ಮುಕ್ತಿಗಾಗಿ ಸಮಾವೇಶ!

ಉಡುಪಿ: ಸರ್ಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳನ್ನು ಮುಕ್ತಿಗೊಳಿಸಿ ಅವುಗಳ ರಕ್ಷಣೆಗೆ ಸಂಘಟಿತರಾಗುವ ದೃಷ್ಟಿಯಿಂದ ಚರ್ಚಿಸಲು ಉಡುಪಿ ಜಿಲ್ಲಾ ಮಟ್ಟದ ದೇವಸ್ಥಾನಗಳ ಪ್ರಮುಖರ ಸಮಾವೇಶ ನಡೆಯಿತು.

ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಈ ಸಮಾವೇಶವನ್ನು ಉದ್ಘಾಟಿಸಿದರು. ಕೇವಲ ದೇವಸ್ಥಾನಗಳನ್ನು ಕಟ್ಟಿದರೆ ಸಾಲದು, ಅವುಗಳನ್ನು ಉಳಿಸುವ ಕೆಲಸವಾಗಬೇಕು. ಈ ಮೂಲಕ ನಮ್ಮ ಸಂಸ್ಕೃತಿಯ ರಕ್ಷಣೆ ಆಗಬೇಕು ಎಂದು ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: ‘ದಿಲ್ಲಿ ಚಲೋ’ ಹೋರಾಟ; ದೆಹಲಿಯಲ್ಲಿ 1 ತಿಂಗಳು ನಿಷೇಧಾಜ್ಞೆ!

ದೇವಸ್ಥಾನ ಮತ್ತು ಮಂದಿರಗಳ ರಾಜ್ಯ ಸಂಯೋಜಕ ಮೋಹನ ಗೌಡ ಈ ವೇಳೆ ಕೆಲ ಪ್ರಮುಖ ಘೋಷಣೆಗಳನ್ನು ಮಾಡಿದರು. ಬ್ರಿಟಿಷರ ಅವಧಿಯಲ್ಲಿಯೇ ದೇವಸ್ಥಾನಗಳ ನಿಯಂತ್ರಣಕ್ಕೆ ಮದ್ರಾಸ್ ಎಂಡೋಮೆಂಟ್ ಕಾಯ್ದೆ ಜಾರಿಗೆ ತರಲಾಗಿದೆ. ದೇಶದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ದೇವಸ್ಥಾನಗಳಿದ್ದು ಇವುಗಳನ್ನು ಬೇರೆ ಬೇರೆ ಕಾಯ್ದೆಗಳ ಮೂಲಕ ನಿಯಂತ್ರಿಸಲಾಗುತ್ತಿದೆ.

ನಮಗೆ ಸ್ವಾತಂತ್ರ್ಯ ಸಿಕ್ಕಿದರೂ ನಮ್ಮ ದೇವಸ್ಥಾನಗಳಿಗೆ ಸ್ವಾತಂತ್ರ್ಯ ಲಭಿಸಿಲ್ಲ. ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣಗಳಿಂದ ಮುಕ್ತಿಗೊಳಿಸಲು ನಾವೆಲ್ಲ ಸಂಘಟಿತರಾಗಬೇಕು. ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರಗಳಲ್ಲಿಯೂ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.

Exit mobile version