Site icon PowerTV

ಗೊಲ್ಲರಹಟ್ಟಿಯಲ್ಲಿ ಮರುಕಳಿಸಿದ ಮೌಢ್ಯಾಚರಣೆ: ಬಾಣಂತಿ ಊರಾಚೆ!

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಕುಂಟನಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಒಂದು ತಿಂಗಳ ಹಸುಗೂಸು ಹಾಗೂ ಬಾಣಂತಿಯನ್ನ ಗ್ರಾಮಸ್ಥರು ಊರಾಚೆ ಇರಿಸಿರುವ ಘಟನೆ ನಡೆದಿದೆ.

ಹೆರಿಗೆ ಬಳಿಕ 25 ವರ್ಷದ ಬಾಣಂತಿ ಬಾಲಮ್ಮ ಹಾಗೂ ಒಂದು ತಿಂಗಳ ಮಗುವನ್ನ ಗ್ರಾಮದ ಹೊರಗಿನ ಗುಡಿಸಲಿನಲ್ಲಿರಿಸಲಾಗಿದೆ. ದೂರನ್ನು ಆಧರಿಸಿ ಗ್ರಾಮಕ್ಕೆ ಭೇಟಿ ನೀಡಿದ ಶಿರಾ ಜೆಎಮ್​​ಎಫ್​ಸಿ ಕೋರ್ಟ್ ಜಡ್ಜ್ ಗೀತಾಂಜಲಿ ಅವರು ಪರಿಶೀಲನೆ ಮಾಡಿದ್ದಾರೆ. ಗ್ರಾಮದಲ್ಲಿ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಿ ಒಂದು ತಿಂಗಳ ಹಸುಗೂಸು ಹಾಗೂ ಬಾಣಂತಿಯನ್ನು ವಾಪಸ್ ಮನೆಗೆ ಸೇರಿಸಿದ್ದಾರೆ. ಮತ್ತೆ ಘಟನೆ ಮರುಕಳಿಸಿದರೇ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.

ಇದನ್ನೂ ಓದಿ: ಬಾಲ ರಾಮನ ಕಣ್ಣು ಕೆತ್ತಿದ ಬೆಳ್ಳಿ ಸುತ್ತಿಗೆ, ಚಿನ್ನದ ಹುಳಿ ಫೋಟೊ ಬಹಿರಂಗ ಪಡಿಸಿದ ಶಿಲ್ಪಿ ಅರುಣ್ ಯೋಗಿ!

ಮೌಢ್ಯಾಚರಣೆಗೆ ಹಸೂಗೂಸು ಬಲಿ!:

ಕಳೆದ 2023 ರಲ್ಲಿ ತುಮಕೂರು ಜಿಲ್ಲೆಯ ಗೊಲ್ಲರಹಟ್ಟಿಯಲ್ಲಿ ಮೂಢನಂಬಿಕೆಯಲ್ಲಿ ಮುಳುಗಿದ್ದ ಕುಟುಂಬಸ್ಥರಿಂದ ಬಾಣಂತಿ, ಮಗುವನ್ನ ಊರ ಹೊರಗಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಪರೀತ ಶೀತದಿಂದ ಬಳಲಿ ಮಗು ಮೃತಪಟ್ಟಿತ್ತು. ತುಮಕೂರು ತಾಲೂಕಿನ ಮಲ್ಲೇನಹಳ್ಳಿ ವ್ಯಾಪ್ತಿಯ ಗೊಲ್ಲರಹಟ್ಟಿಯಲ್ಲಿ ಮೌಢ್ಯಕ್ಕೆ 1 ತಿಂಗಳ ಮಗು ಬಲಿಯಾಗಿತ್ತು. ದೇವರಿಗೆ ಸೂತಕ ಆಗುತ್ತೆ ಎಂದು ಬಾಣಂತಿ, ಮಗುವನ್ನು ಊರಿನ ಹೊರಗೆ ಗುಡಿಸಲಲ್ಲಿಟಲಾಗಿತ್ತು. ಮಗುವಿಗೆ ವಿಪರೀತ ಶೀತವಾಗಿದ್ದು ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಕುಟುಂಬಸ್ಥರ ಮೂಢನಂಬಿಕೆಗೆ 1 ತಿಂಗಳ ಕಂದಮ್ಮ ಸಾವನ್ನಪ್ಪಿತ್ತು.

ಇವರ ಮೌಢ್ಯದ ಕುರಿತು ಇಲ್ಲಿನ ಜಿಲ್ಲಾಡಳಿತ ಅರಿವು ಮೂಡಿಸುವ ಕಾರ್ಯವನ್ನು ಮಾಡಿತ್ತು, ಜೊತೆಗೆ ಎಚ್ಚರಿಕೆಯನ್ನು ನೀಡಿ ಬಾಣಂತಿಯನ್ನು ಮನೆಯ ಒಳಗೆ ಸೇರಿಸಿತ್ತು. ಆದರೂ ಬದಲಾಗದ ಸಮುದಾಯ ಮತ್ತೆ ಬಾಣಂತಿಯನ್ನು ಹಾಗಯ ಮಗುವನ್ನು ಮನೆಯನ್ನು ಊರ ಹೊರಗೆ ಹಾಕಲಾಗಿತ್ತು.

Exit mobile version