Site icon PowerTV

ಶಿವಾಜಿನಗರ ಇರುವುದು ಭಾರತದಲ್ಲಿ, ಪಾಕಿಸ್ತಾನದಲ್ಲಿ ಅಲ್ಲ : ಶಾಸಕ ಯತ್ನಾಳ್

ವಿಜಯಪುರ : ಶಿವಾಜಿನಗರದ ಚಾಂದಿನಿ ಚೌಕ್​ನಲ್ಲಿ ಹಸಿರು ಬಾವುಟ ಹಾರಾಟವಾಗಿರುವ ವಿಚಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಶಿವಾಜಿನಗರ ಇರುವುದು ಭಾರತದಲ್ಲಿ, ಪಾಕಿಸ್ತಾನದಲ್ಲಲ್ಲ ಎಂದು ಕುಟುಕಿದ್ದಾರೆ.

ಮಾನ್ಯ ಪೊಲೀಸ್ ಆಯುಕ್ತರೇ, ಡಿಸಿಪಿ ಅವರೇ, ಈ ರೀತಿ ಶತ್ರು ದೇಶದ ಬಣ್ಣವನ್ನು ಹೋಲುವ ಹಸಿರು ಧ್ವಜವನ್ನು ಸಾರ್ವಜನಿಕ ಪ್ರದೇಶದಲ್ಲಿ ಹಾರಿಸುವುದು ನಮ್ಮ flag codeಗೆ ವಿರುದ್ದವಾದದ್ದಲ್ಲವೇ..? ಈ ಕೂಡಲೇ, ಇದನ್ನು ತೆಗೆದು ಇಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಎಂದು ಆಗ್ರಹಿಸಿದ್ದಾರೆ.

ಹಸಿರು ಬಾವುಟ ಹಾರಾಟದ ವಿಡಿಯೋ ಟ್ವೀಟರ್​ನಲ್ಲಿ ಹರಿದಾಡುತ್ತಿದ್ದಂತೆ ಹಿಂದೂ ಸಂಘಟನೆಯಿಂದ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಶಿವಾಜಿನಗರದ ಚಾಂದಿನಿ ಚೌಕ್​ನಲ್ಲಿ ಹಾರುತ್ತಿರುವ ಈ ಧ್ವಜ ಯಾವ ಧರ್ಮದ್ದು..? ಕಾಂಗ್ರೆಸ್​ ನಾಯಕರು ಉತ್ತರ ಕೊಡಬೇಕು. ಗಂಡಸರೇ ಆಗಿದ್ರೆ ಈ ಧ್ವಜ ತೆಗೆಸ್ರಿ ಎಂದು ನೆಟ್ಟಿಗರು ಕಮೆಂಟ್ ಹರಿಬಿಟ್ಟಿದ್ದಾರೆ.

ಹಸಿರು ಬಾವುಟ ಕೆಳಗಿಳಿಸಿದ ಪೊಲೀಸರು

ಘಟನೆ ಬೆಳಕಿಗೆ ಬಂದ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಸ್ಥಳಕ್ಕೆ ತೆರಳಿ ಹಸಿರು ಬಾವುಟವನ್ನು ತೆರವುಗೊಳಿಸಿದ್ದಾರೆ. ಸ್ಥಳದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ. ಮಾಹಿತಿ ಪ್ರಕಾರ ಮುಸ್ಲಿಂ ಧರ್ಮದ ಬಾವುಟವನ್ನು ಚಾಂದಿನಿ ಚೌಕದಲ್ಲಿ ಹಾರಿಸಲಾಗಿತ್ತು ಎಂದು ತಿಳಿದುಬಂದಿದೆ.

Exit mobile version