Site icon PowerTV

Jagadish Shetter: ಜಗದೀಶ್‌ ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆ ಬಹುತೇಕ ಖಚಿತ..?

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಕಾರ್ಯತಂತ್ರವನ್ನು ಹೆಣೆಯುತ್ತಿರುವ ಬಿಜೆಪಿ ಈಗ ಪಕ್ಷ ತೊರೆದ ನಾಯಕರತ್ತ ಕಣ್ಣಿಟ್ಟಿದೆ.ಮಾಜಿ ಸಿಎಂ ಜಗದೀಶ್‌ ಶೆಟ್ಟರ್​ಗೆ ಗಾಳ ಹಾಕುತ್ತಿದ್ದಾರೆ.

ಹೌದು,ಈ ಸಂಬಂಧ ದೆಹಲಿಗೆ ಭೇಟಿ ನೀಡಿರುವ ಜಗದೀಶ್‌ ಶೆಟ್ಟರ್‌‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಮ್ಮುಖದಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಜಗದೀಶ್‌ ಶೆಟ್ಟರ್‌ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಮೂರು ನಾಯಕರ ಘರ್‌ ವಾಪ್ಸಿ ಪಕ್ಕಾನಾ?

ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಘರ್ ವಾಪ್ಸಿ ಪಕ್ಕಾ ಆಗುತ್ತಿವೆಯೇ ಎಂಬ ಚರ್ಚೆಗಳು ರಾಜಕೀಯ ಕೇಳಿಬರುತ್ತಿವೆ. ಇತ್ತ ರೆಡ್ಡಿ ಜತೆ ಮಾತನಾಡುವುದಕ್ಕೆ ಬಳ್ಳಾರಿ ಭಾಗದ ನಾಯಕರು ಉತ್ಸಾಹ ತೋರಿದ್ದಾರೆ.

ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸದೃಢಗೊಳಿಸಲು ಬಿಜೆಪಿ ಪ್ಲಾನ್ ಮಾಡಿದೆ. ಹೀಗಾಗಿ ರೆಡ್ಡಿ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಲು ಆಫರ್‌ ನೀಡಲಾಗಿದೆ. ಆದರೆ, ರೆಡ್ಡಿ ಕಡೆಯಿಂದ ಕಂಡಿಷನ್ ಇದೆ. ಹೀಗಾಗಿ ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.

ಶೆಟ್ಟರ್‌ಗೆ ಗಾಳ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದ ಜಗದೀಶ್‌ ಶೆಟ್ಟರ್‌, ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಮಹೇಶ್‌ ಟೆಂಗಿನಕಾಯಿ ವಿರುದ್ಧ ಸೋಲು ಕಂಡಿದ್ದರು. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಲಿಂಗಾಯತ ಮತಗಳನ್ನು ತರುವಲ್ಲಿ ಶೆಟ್ಟರ್‌ ಯಶಸ್ವಿಯಾಗಿದ್ದರು.

ಶೆಟ್ಟರ್‌ಗೆ ಲೋಕಸಭೆಗಾ? ರಾಜ್ಯಸಭೆಗಾ?

ಈಗಾಗಲೇ ಕಾಂಗ್ರೆಸ್‌ ಸೇರಿ 9 ತಿಂಗಳು ಕಳೆದಿದ್ದರೂ ಅಲ್ಲಿ ಜಗದೀಶ್‌ ಶೆಟ್ಟರ್‌ಗೆ ಸೂಕ್ತ ಸ್ಥಾನಮಾನವನ್ನು ನೀಡಲಾಗಿಲ್ಲ. ಅಲ್ಲಿ ಅವರನ್ನು ಕಾಂಗ್ರೆಸ್‌ ನಾಯಕರು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಈ ಎಲ್ಲ ಬೇಸರಗಳಿಂದ ಶೆಟ್ಟರ್‌ ಮರಳಿ ಗೂಡಿಗೆ ಸೇರಲು ಹೊರಟಿದ್ದಾರೆ ಎನ್ನಲಾಗಿದೆ.

ಹೀಗಾಗಿ ಅಮಿತ್‌ ಶಾ ಜತೆಗೆ ಮಾತುಕತೆ ಮಾಡಿದ್ದು, ಉನ್ನತ ಸ್ಥಾನಮಾನ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಅಲ್ಲದೆ, ರಾಜ್ಯಸಭೆಗೆ ಆಯ್ಕೆ ಅಥವಾ ಲೋಕಸಭಾ ಚುನಾವಣೆಗೆ ಟಿಕೆಟ್‌ ನೀಡುವ ಆಫರ್‌ ನೀಡಲಾಗಿದೆ ಎನ್ನಲಾಗಿದೆ.

 

 

Exit mobile version