Site icon PowerTV

ರಾಜ್ಯ ಸರ್ಕಾರ ಹುಚ್ಚು ದೊರೆ ಸರ್ಕಾರ: ಕೆ.ಎಸ್.​ಈಶ್ವರಪ್ಪ ಕಿಡಿ

ಶಿವಮೊಗ್ಗ: ರಾಜ್ಯಸರ್ಕಾರ ಹುಚ್ಚು ಸರ್ಕಾರ ಎಂದು ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ಕಿಡಿಕಾರಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ಹಿರೇಮಗಳೂರಿನ ಕೋದಂಡರಾಮ ಸ್ವಾಮಿ ದೇವಾಲಯದ  ಅರ್ಚಕರಾಗಿರುವ ಕನ್ನಡದ ಪೂಜಾರಿ, ಹಿರೇಮಗಳೂರು ಕಣ್ಣನ್‌ ಅವರಿಗೆ 10 ವರ್ಷದ ವೇತನ ವಾಪಸ್‌  ನೀಡುವಂತೆ ಸೂಚಿಸಿ ನೋಟಿಸ್‌ ನೀಡಿರುವುದು ಈಗ ರಾಜಕೀಯ ಚರ್ಚೆಗೂ ಕಾರಣವಾಗಿದೆ ಇದು ಹುಚ್ಚು ಸರ್ಕಾರ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಎಂದು ಹೇಳಿದ್ದಾರೆ.

ದೇವಾಲಯದ ವಾರ್ಷಿಕ ಆದಾಯಕ್ಕಿಂತ ವೆಚ್ಚವೇ ಹೆಚ್ಚುವರಿಯಾಗಿದೆ ಎಂದು ದೇವಸ್ಥಾನದ ಅರ್ಚಕರಿಗೆ ನೀಡುತ್ತಿದ್ದ ಸಂಬಳವನ್ನು ರಾಜ್ಯ ಸರ್ಕಾರವು ವಾಪಸ್ ಕೇಳಿದೆ. ದೇವಾಲಯದ ಆದಾಯ ಕಡಿಮೆ ಇದ್ದು, ಸಂಬಳ ಹೆಚ್ಚುವರಿಯಾಗಿ ಪಾವತಿ ಆಗಿದೆ. ಹೀಗಾಗಿ 4,500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡಲು ಕಣ್ಣನ್‌ ಅವರಿಗೆ ಸೂಚನೆ ನೀಡಲಾಗಿದೆ.

ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು 7,500 ರೂ. ಸಂಬಳ ಜಮೆಯಾಗುತ್ತಿತ್ತು. 7,500 ರೂಪಾಯಿ ನೀಡಿದ ಸಂಬಳದಲ್ಲಿ 4,500 ರೂ. ಅಂತೆ 10 ವರ್ಷದ ಹಣವನ್ನು ವಾಪಸ್ ನೀಡಲು ಸೂಚನೆ ನೀಡಲಾಗಿದೆ. ಸದ್ಯ ಪ್ರತಿ ತಿಂಗಳ ಬರುತ್ತಿದ್ದ ಸಂಬಳವನ್ನು ತಡೆ ಹಿಡಿಯಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಚಿಕ್ಕಮಗಳೂರು ತಹಸೀಲ್ದಾರ್ ಸುಮಂತ್ ನೋಟಿಸ್ ಜಾರಿ ಮಾಡಿದ್ದಾರೆ.

ಎಂಥಾ ಅಪಮಾನ ಇದು? 

ಚಿಕ್ಕಮಗಳೂರು ತಹಸೀಲ್ದಾರ್‌ ಅವರು ನೋಟಿಸ್‌ ನೀಡಿರುವುದು ಗೌರವಾನ್ವಿತ ಅರ್ಚಕರಿಗೆ ಮಾಡಿದ ದೊಡ್ಡ ಅಪಚಾರ. ಹಿರೇಮಗಳೂರು ಕಣ್ಣನ್‌ ಅವರಂಥವರಿಗೇ ಈ ರೀತಿ ನೋಟಿಸ್‌ ಬಂದ್ರೆ ಸಂಸ್ಕೃತಿಯ ಗತಿ ಏನು ಎಂದು ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ ಪ್ರಶ್ನೆ ಮಾಡಿದರು.

ʻʻಕಾಂಗ್ರೆಸ್ ಸರ್ಕಾರದ ಆದಾಯದ ಮೇಲೆಯೇ ಸಂಬಳ ನಿರ್ಧಾರ ಮಾಡುವುದಾದರೆ ಹೆಚ್ಚು ಆದಾಯ ಬರುವ ದೇವಾಲಯದಲ್ಲಿ ಹೆಚ್ಚು ಸಂಬಳ ಕೊಡ್ತಾರಾ?ʼʼ ಎಂದು ಪ್ರಶ್ನಿಸಿರುವ ಅವರು, ಈ ರೀತಿಯ ನೋಟಿಸನ್ನು ಹಿಂದೂ ಸಮಾಜ ಸಹಿಸಲ್ಲ ಎಂದರು.
ಮುಜರಾಯಿ ಸಚಿವರು ಕ್ಷಮೆ ಕೇಳಬೇಕು
ʻʻಸಚಿವ ರಾಮಲಿಂಗಾ ರೆಡ್ಡಿ ಅವರು ಇದೊಂದು ಸಣ್ಣ ವಿಷಯ ಎಂದು ಹೇಳಿದ್ದಾರೆ. ರೆಡ್ಡಿ ಅವರು ತಮಗೆ ಈ ರೀತಿ ಅಪಮಾನ ಆಗಿದ್ದರೆ ಸಹಿಸಿಕೊಳ್ಳುತ್ತಿದ್ದರಾ? ಅರ್ಚಕರು ಪೂಜೆ ಮಾಡುತ್ತಿರುವುದರಿಂದ ಸಂಸ್ಕೃತಿ ಉಳಿದಿದೆ. ಕಾಂಗ್ರೆಸ್ ಸರ್ಕಾರ ಸಂಸ್ಕೃತಿಗೆ ಮಾಡುತ್ತಿರುವ ಅಪಮಾನ ಇದು. ಹೀಗಾಗಿ ಮುಜರಾಯಿ ಸಚಿವರು ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು. ಮುಂದೆ ಹೀಗೆ ನೋಟಿಸ್ ಕೋಡಲ್ಲ ಅಂತ ಹೇಳಬೇಕು. ಇಲ್ಲವಾದರೆ ಬಿಜೆಪಿ ಹೋರಾಟ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆʼʼ ಎಂದು ಈಶ್ವರಪ್ಪ ಹೇಳಿದ್ದಾರೆ.

 

Exit mobile version