Site icon PowerTV

ಸದಾಶಿವ ಆಯೋಗದ ವರದಿ ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ!

ಶಿವಮೊಗ್ಗ: ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸದಸ್ಯರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಪರಿಶಿಷ್ಟ ಜಾತಿಗಳ ಸಮುದಾಯದಲ್ಲಿ ಅನಗತ್ಯ ಗೊಂದಲ ಉಂಟು ಮಾಡಿ ಜಾತಿ, ಜಾತಿಗಳ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವ ಈ ದೋಷಪೂರಿತ ವರದಿಯನ್ನು ಹಿಂದಿನ ಸರ್ಕಾರ ಒಪ್ಪಿರಲಿಲ್ಲ. ಆದರೆ, ಸರಿಯಾದ ಸಮೀಕ್ಷೆ ನಡೆಸದೇ ಕೆಲವರ ಒತ್ತಾಸಗೆ ಮಣಿದು ತರಾತುರಿಯಲ್ಲಿ ಈಗಿನ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಈ ವರದಿಯು ಅನುಮಾನ ಮತ್ತು ಆತಂಕಕ್ಕೆ ಎಡೆ ಮಾಡಿರುವಂತಹ ದೋಷಪೂರಿತ ವರದಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಲಪಂಥೀಯ ಕಾರ್ಯಕರ್ತರ ದ್ವೇಷ ಭಾಷಣಗಳ ಮೇಲೆ ನಿಗಾ: ಗೃಹ ಸಚಿವ ಪರಮೇಶ್ವರ್​!

ಪರಿಶಿಷ್ಟ ಜಾತಿಯಲ್ಲಿಯೇ ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗಿರುವ ಬಂಜಾರ, ಕೊರಮ, ಕೊರಚ, ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಪ್ರತ್ಯೇಕಿಸುವ ಹುನ್ನಾರ ಕಂಡು ಬರುತ್ತಿದೆ. ಇದರಲ್ಲಿ ಈ ಸಮುದಾಯಗಳನ್ನು ಮೀಸಲಾತಿ ಸೌಲಭ್ಯದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿದೆ. ಹೀಗಾಗಿ, ಆಯೋಗದ ಈ ಅವೈಜ್ಞಾನಿಕ ವರದಿ ರದ್ದುಪಡಿಸಬೇಕೆಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Exit mobile version