Site icon PowerTV

ಐಸಿಸ್ ನಂಟಿರುವ ಮೌಲ್ವಿ ಜೊತೆ ಸಿದ್ದರಾಮಯ್ಯ : ತನಿಖೆ ಮಾಡುವಂತೆ ಅಮಿತ್ ಶಾಗೆ ಶಾಸಕ ಯತ್ನಾಳ್ ಪತ್ರ

ವಿಜಯಪುರ : ಐಸಿಸ್ ಉಗ್ರರ ಬೆಂಬಲಿಗನೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ವೇದಿಕೆ ಹಂಚಿಕೊಂಡಿರುವ ಪ್ರಕರಣ ಇದೀಗ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದೆ. ಇತ್ತ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಪತ್ರ ಬರೆದಿದ್ದಾರೆ.

ಸಿಎಂ ಸಿದ್ಧರಾಮಯ್ಯ ಅವರು ಭಯೋತ್ಪಾದಕ ಸಂಘಟನೆಯಾಗಿರುವ ಐಸಿಸ್‌ ಪರ ಅನುಕಂಪ ಹೊಂದಿರುವ ಮೌಲ್ವಿ ತನ್ವೀರ್‌ ಪೀರಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಈ ಹಿಂದೆ ಹಲವು ಬಾರಿ ಮಧ್ಯಪ್ರಾಚ್ಯದಲ್ಲಿ ಅವರು ಮೂಲಭೂತವಾದಿ ಸಂಘಟನೆಗಳನ್ನು ಭೇಟಿ ಮಾಡಿ ಬಂದಿದ್ದಾರೆ. ಇನ್ನೂ ಅಚ್ಚರಿಯ ವಿಚಾರವೇನೆಂದರೆ, ಸಿಎಂ ಸಿದ್ದರಾಮಯ್ಯ ಅವರನ್ನು ಪೀರಾ ಭೇಟಿ ಮಾಡಿರುವುದು ಇದು ಮೊದಲೇನೆಲ್ಲ. ಈಗಾಗಲೇ ಹಲವು ಬಾರಿ ಇವರಿಬ್ಬರು ಭೇಟಿಯಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೇಶದಲ್ಲಿ ದ್ವೇಷದ ವಾತಾವರಣ ನಿರ್ಮಾಣ ಮಾಡಬೇಕು ಎಂಬ ದೃಷ್ಟಿಯಿಂದ ತನ್ವೀರ್‌ ಪೀರಾ ಮುಸ್ಲಿಂ ದೇಶಗಳಿಂದ ಹಣಕಾಸು ನೆರವು ಪಡೆಯುತ್ತಿದ್ದಾರೆ. ಈ ಬಗ್ಗೆ ನನಗೆ ಕೆಲವೊಂದು ಮಾಹಿತಿಗಳೂ ಇವೆ. ತಮ್ಮ ಆಪ್ತ ಭದ್ರತೆ ಹಾಗೂ ಗುಪ್ತಚರ ವಿಭಾಗದ ಅಧಿಕಾರಿಗಳ ಎಚ್ಚರಿಕೆಯನ್ನೂ ಮೀರಿ, ಪೀರಾನನ್ನು ಭೇಟಿಯಾಗಿರುವುದು ನಿಜಕ್ಕೂ ದುರಾದೃಷ್ಟಕರ ಎಂದು ಯತ್ನಾಳ್ ಹೇಳಿದ್ದಾರೆ.

ಸಿದ್ದರಾಮಯ್ಯ ಭೇಟಿ ಹಿಂದಿನ ಉದ್ದೇಶವೇನು?

ಕೇಂದ್ರದ ಅಧಿಕಾರಿಗಳು ತನ್ವೀರ್‌ ಪೀರಾರನ್ನು ವಿಚಾರಣೆ ಮಾಡಬೇಕು. ಐಸಿಸ್‌ ನಾಯಕರನ್ನು ಭೇಟಿಯಾಗಿರುವುದರ ಹಿಂದಿನ ಉದ್ದೇಶವೇನು? ಅವರ ಪ್ರಯಾಣಕ್ಕೆ ಹಣ ಎಲ್ಲಿಂದ ಬರುತ್ತದೆ? ಈ ಬಗ್ಗೆ ತನಿಖೆ ಮಾಡಬೇಕು. ಅವರ ಫಂಡಿಂಗ್‌ ಮ್ಯಾನೇಜರ್‌ ಯಾರು? ಸಿದ್ದರಾಮಯ್ಯರನ್ನು ಬಹಳ ಬಾರಿ ಭೇಟಿಯಾಗಿರುವುದರ ಹಿಂದಿನ ಉದ್ದೇಶವೇನು? ಇದು ರಾಷ್ಟ್ರೀಯ ಭದ್ರತೆಯ ವಿಚಾರವಾಗಿರುವ ಕಾರಣ, ಈ ಪ್ರಕರಣವನ್ನು ಎನ್‌ಐಎ ತನಿಖೆ ಮಾಡಬೇಕು ಎಂದು ಶಾಸಕ ಯತ್ನಾಳ್‌ ಅವರು ಅಮಿತ್‌ ಶಾರಿಗೆ ಮನವಿ ಮಾಡಿದ್ದಾರೆ.

Exit mobile version