Site icon PowerTV

ರಾಜ್ಯದಲ್ಲಿ ಮೂವರು ಸಿಎಂ ಇದ್ದಾರೆ : ಅಶೋಕ್ ಹೇಳಿಕೆಗೆ ಪರಮೇಶ್ವರ್ ಗರಂ

ವಿಜಯಪುರ : ರಾಜ್ಯದಲ್ಲಿ ಮೂರು ಮಂದಿ ಸಿಎಂ ಇದ್ದಾರೆ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಗರಂ ಆಗಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರ ಹೇಳಿಕೆಗೆ ನಾವು ಉತ್ತರ ಕೊಡೋಕೆ ಆಗಲ್ಲ. ವಿಪಕ್ಷದವರು ಇಲ್ಲ ಸಲ್ಲದ ಹೇಳಿಕೆ ಕೊಡ್ತಾರೆ. ಅದಕ್ಕೆಲ್ಲಾ ಉತ್ತರ ಕೊಡೋಕೆ ಆಗಲ್ಲ ಎಂದು ಕುಟುಕಿದ್ದಾರೆ.

ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕೇಂದ್ರ ಸರ್ಕಾರ ಒಂದು ರೂಪಾಯಿ ಬಿಡಿಗಾಸು ಪರಿಹಾರ ಬಿಡುಗಡೆ ಮಾಡಿಲ್ಲ. ಮೊದಲು ಪರಿಹಾರದ ಹಣ ಬಿಡುಗಡೆ ಮಾಡುವುದಕ್ಕೆ ಅವರಿಗೆ ಹೇಳಿ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಏನೆಲ್ಲಾ ಹಣ ಕೊಡಬೇಕು. ಅದು ನಮ್ಮ ಹಕ್ಕು, ಎನ್​ಡಿಆರ್​ಎಫ್ ನಿಯಮದಂತೆ 17 ಸಾವಿರ ಕೋಟಿ ನಷ್ಟದ ಮನವಿ ಕೊಟ್ಟಿದ್ದೇವೆ.‌ ಬರಗಾಲಕ್ಕಾಗಿ ಒಂದು ಬಿಡಿಗಾಸು ಹಣ ಬಿಡುಗಡೆ ಮಾಡಿಲ್ಲ. ಅದನ್ನೇ ಕೇಳೋಕೆ ಹೇಳಿ ಅವರಿಗೆ ಮೊದಲು ಎಂದು ಡಾ.ಜಿ. ಪರಮೇಶ್ವರ್ ಚಾಟಿ ಬೀಸಿದ್ದಾರೆ.

ಕಾರ್ಯಕರ್ತರಿಗೂ ಕೊಡುತ್ತೇವೆ

ರಾಜ್ಯಕ್ಕೆ ರಣದೀಪ್ ಸಿಂಗ್ ಸುರ್ಜೇವಾಲಾ ಆಗಮಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿಗಮ ಮಂಡಳಿ ಅಧ್ಯಕ್ಷರ ನೇಮಕದ ವಿಚಾರವಾಗಿ ಮುಖ್ಯಮಂತ್ರಿಗೆ ಸೂಚನೆ ಕೊಡಲು ಬಂದಿರಬಹುದು. ಸೂಚನೆ ಕೊಟ್ಟ ನಂತರ ನಾವು ಚರ್ಚೆ ಮಾಡುತ್ತೇವೆ. ನಿಗಮ ಮಂಡಳಿ ಅಧ್ಯಕ್ಷರ ಸ್ಥಾನ ಕಾರ್ಯಕರ್ತರಿಗೆ, ಶಾಸಕರಿಗೆ ಕೊಡುವ ವಿಚಾರವಾಗಿ ಮಾತನಾಡಿ, ಎಲ್ಲರಿಗೂ ಕೊಡುತ್ತೇವೆ. ಶಾಸಕರಿಗೂ, ಕಾರ್ಯಕರ್ತರಿಗೂ ಕೊಡುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.

Exit mobile version