Site icon PowerTV

ಸರ್ಕಾರದ ತಪ್ಪುಗಳನ್ನ ಏಕಾಂಗಿಯಾಗಿ ಪ್ರಶ್ನೆ ಮಾಡೋದು ಕುಮಾರಸ್ವಾಮಿ ಒಬ್ಬನೇ : ಹೆಚ್.ಡಿ. ಕುಮಾರಸ್ವಾಮಿ

ರಾಮನಗರ : ತಮ್ಮ ವಿರುದ್ಧ ಮತ್ತೆ ಪೋಸ್ಟರ್ ವಾರ್ ಆರಂಭಿಸಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಅಂಟಿಸಿಕೊಳ್ಳಲಿ ಬಿಡಿ.. ಯಾರು ಬೇಡ ಅಂತಾರೆ. ನನಗೆ ಯಾರು ಏನೂ ಮಾಡೋಕಾಗಲ್ಲ ಎಂದು ಗರಂ ಆಗಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ತಪ್ಪುಗಳನ್ನ ಏಕಾಂಗಿಯಾಗಿ ಪ್ರಶ್ನೆ ಮಾಡೋದು ಕುಮಾರಸ್ವಾಮಿ ಒಬ್ಬನೇ. ಎಲ್ಲರೂ ಮೌನಕ್ಕೆ ಶರಣಾಗಿದ್ದಾಗ ಅಕ್ರಮ ಸಂಪತ್ತು, ವರ್ಗಾವಣೆ ದಂಧೆ ಬಗ್ಗೆ ಧ್ವನಿ ಎತ್ತಿದ್ದು ನಾನು. ನಾನು ಇಲ್ಲಿವರೆಗೂ ಏನು ಹೇಳಿದ್ದೇನೋ ಸರ್ಕಾರ ಒಂದಕ್ಕೂ ಉತ್ತರ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ ಪಡೆಯುವೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾಳಿಗೆ ತಿರುಗೇಟು ನೀಡಿದ್ದಾರೆ. ಕೊಳ್ಳೆ ಹೊಡೆದಾಗಿದೆ, ಅವರ ಜೀವನ ಏನು ಅಂತ ಗೊತ್ತಿದೆ. ದೇಶದ ವ್ಯವಸ್ಥೆಯಲ್ಲಿ ಕಳ್ಳರು ಒಂದೇ, ಸುಳ್ಳರು ಒಂದೇ. ಭಗವಂತ ಇದ್ದಾನೆ, ಅಂತಿಮವಾಗಿ ಎಲ್ಲಾ ತೀರ್ಮಾನ ಮಾಡ್ತಾನೆ. ಈ ಸಮಾಜದಲ್ಲಿ ಹಣದ ಮದ ಇದ್ದವರು ಎಲ್ಲವನ್ನೂ ಕೊಂಡುಕೊಳ್ತೀನಿ ಎಂದುಕೊಂಡಿದ್ದಾರೆ. ಎಲ್ಲದಕ್ಕೂ ಒಂದು ಅಂತಿಮ ಇದ್ದೇ ಇದೆ ಎಂದು ಗುಡುಗಿದ್ದಾರೆ.

ಹಣ ಲೂಟಿ ಮಾಡೋಕೆ ಬರ್ತಿದ್ದಾರಾ?

ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗಮನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಜನರ ಕಷ್ಟ ಸುಖ ನೋಡಲು ಬರಲಿಲ್ಲ. ಈಗ ಜನರ ಹಣ ಲೂಟಿ ಮಾಡಲು ನಿಗಮ ಮಂಡಳಿ ನೇಮಕ ಮಾಡೋಕೆ ಬರ್ತಿದ್ದಾರಾ? ನಿಗಮ ಮಂಡಳಿ ರಚನೆ ಮಾಡಿ ಜನರ ಕಷ್ಟ ಕೇಳ್ತಿರಾ? ಅದು ಯಾವುದೋ ಸಿಎಂ ಕ್ಷೇತ್ರದಲ್ಲಿ ಶಾಲಾ ಕಟ್ಟಡ ಕಟ್ಟಲು ದುಡ್ಡುಲ್ಲ ಅಂತ ಸಿಎಸ್ಆರ್ ಫಂಡ್ ಕೇಳ್ತಿದ್ದೀರಾ? ಸಿಎಂ ಕ್ಷೇತ್ರದಲ್ಲಿ 2.5 ಲಕ್ಷಕ್ಕೆ ಯಾವುದೋ ಖಾಸಗಿ ಕಂಪನಿ ವಿರುದ್ಧ ಅರ್ಜಿ ಇಡ್ಕೊಂಡು ನಿಂತವ್ರೆ. ಸಿಎಂ ಮನೆಗೆ ನವೀಕರಣ ಮಾಡಲು ಕೋಟ್ಯಂತರ ಹಣ ಖರ್ಚು ಮಾಡ್ತೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

Exit mobile version