Site icon PowerTV

ರೌಡಿ ಶೀಟರ್‌ ಪರೇಡ್‌: 2 ತಿಂಗಳಲ್ಲಿ ರೌಡಿ ಶೀಟ‌ರ್ ಪಟ್ಟದಿಂದ ಮುಕ್ತಿಯ ಭರವಸೆ!

ದೊಡ್ಡಬಳ್ಳಾಪುರ: ರೌಡಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ. ಅಕ್ರಮ, ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಪೂರ್ಣ ತ್ಯಜಿಸಬೇಕು ಎಂದು ಡಿವೈಎಸ್‌ಪಿ ಪಿ.ರವಿ ಹೇಳಿದರು.

ನಗರದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರೌಡಿ ಶೀಟರ್‌ಗಳ ಪರೇಡ್‌ನಲ್ಲಿ ಎಚ್ಚರಿಕೆ ನೀಡಿದರು. ರೌಡಿಸಂ ಜೀವನವನ್ನು ಹಾಳು ಮಾಡುವುದಲ್ಲದೆ, ಜೀವನ ಪರ್ಯಂತ ರೌಡಿಶೀಟರ್ ಪಟ್ಟಕಟ್ಟಿಕೊಂಡು ಬದುಕಬೇಕಾಗುತ್ತದೆ. ಆದರೆ, ನೆಮ್ಮದಿ ಜೀವನಕ್ಕಾಗಿ ಕೂಲಿ ಕೆಲಸ ಮಾಡಿದರೂ ಪರವಾಗಿಲ್ಲ, ಕುಟುಂಬದೊಂದಿಗೆ ಖುಷಿಯಿಂದ ಜೀವನ ಸಾಗಿಸಬಹುದು, ರೌಡಿ ಚಟುವಟಿಕೆ, ಕಾನೂನು ಬಾಹಿರ ಕೆಲಸಗಳು, ಹೀಗೆ ಮುಂದುವರೆದರೆ, ಜಿಲ್ಲೆಯಿಂದಲೇ ಗಡಿಪಾರು ಮಾಡಲಾಗುವುದು.

ಇದನ್ನೂ ಓದಿ: ದತ್ತಮಾಲೆ ಏಕೆ ಹಾಕಬಾರದು?: ಕುಮಾರಸ್ವಾಮಿ

ಹತ್ತು ಇಪ್ಪತ್ತು ವರ್ಷಗಳಾದರೂ ರೌಡಿಶೀಟರ್ ಪಟ್ಟ ಹೋಗುವುದಿಲ್ಲ. ಕಳ್ಳತನ, ಕೊಲೆ, ದೌರ್ಜನ್ಯ ಮಾಡಿದರೆ, ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕಾನೂನು ಬಿಗಿಯಾಗಿದೆ. ಕುಟುಂಸ್ಥರು ಗೌರವ ನೀಡುವಷ್ಟು, ರೀತಿಯಲ್ಲಿಯಾದರೂ ಜೀವನ ಮಾಡಿ, ಪೊಲೀಸರಿಗೆ ತಿಳಿಯದಂತೆ ಸ್ಥಳ, ಫೋನ್ ನಂಬ‌ರ್ ಬದಲಾವಣೆ ಮಾಡಬಾರದು. ಕಾನೂನಿಗೆ ಬೆಲೆಕೊಟ್ಟು ಸಮಾಜದಲ್ಲಿ ಒಳ್ಳೆಯವರಾಗಿ ಬದುಕಿ, ಮಾದರಿ ಜೀವನ ನಡೆಸಿದರೆ, ರೌಡಿಶೀಟರ್ ಬಂದ್ ಮಾಡಲಾಗುವುದು ಎಂದರು.

ಗ್ರಾಮಾಂತರ ಠಾಣಾ ಇನ್ಸೆಕ್ಟರ್ ಮುನಿಕೃಷ್ಣ ಮಾತನಾಡಿ, 6 ತಿಂಗಳಲ್ಲಿ 78 ಮಂದಿ ರೌಡಿ ಶೀಟರ್‌ಗಳಲ್ಲಿ 34 ಮಂದಿಗೆ ರೌಡಿ ಪಟ್ಟದಿಂದ ಬಿಡುಗಡೆಗೊಳಿಸಲಾಗಿದೆ. ಉಳಿದ 44 ಮಂದಿಯ ಜೀವನ ಶೈಲಿಯಾ ಪರಾಮರ್ಶೆ ಮಾಡಲಾಗುತ್ತಿದೆ. ರೌಡಿ ಶೀಟರ್‌ಗಳ ಜೀವನ ಶೈಲಿ ಸರಿ ಹೋದರೆ, ಕೇವಲ 2 ತಿಂಗಳಲ್ಲಿ ರೌಡಿ ಶೀಟರ್ ಪಟ್ಟದಿಂದ ಮುಕ್ತಿ ಕಾಣಿಸಲಾಗುವುದು. ಮುಂದುವರೆದರೆ ಮತ್ತೊಂದು ಕೇಸ್ ಓಪನ್ ಆಗುತ್ತದೆ. 2-3 ತಿಂಗಳಿಗೆ ಒಮ್ಮೆ ಪರಾಮರ್ಶೆ ಮಾಡಲಾಗುವುದು ಎಂದರು.

Exit mobile version