ಮಂಡ್ಯ: ಪತ್ನಿ ಹೆಸರಿನಲ್ಲಿದ್ದ ಕೋಟ್ಯಂತರರೂ ಮೌಲ್ಯದ ಆಸ್ತಿ ಆಸೆಗಾಗಿ ಆಕೆ ಮಲಗಿದ್ದ ಸಮಯದಲ್ಲಿ ಉಸಿರುಗಟ್ಟಿಸಿ ಪತಿಯೇ ಹತ್ಯೆಗೈದಿರುವ ಘಟನೆ ನಗರದ ವಿ.ವಿ.ನಗರ ಬಡಾವಣೆಯಲ್ಲಿ ನಡೆದಿದೆ.
ಎಸ್.ಶೃತಿ (32) ಎಂಬಾಕೆಯೇ ಕೊಲೆಯಾದವಳು. ಟಿ.ಎನ್.ಸೋಮಶೇಖರ್ (41) ಎಂಬಾತನೇ ಕೊಲೆ ಮಾಡಿದ ಪತಿ.
ಘಟನೆ ವಿವರ
ಶ್ರುತಿಯ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ ಎನ್ನಲಾಗಿದೆ. ಅದರಲ್ಲಿ ಒಂದು ಭಾಗವನ್ನು ಮಾರಾಟ ಮಾಡಲು ಶ್ರುತಿ ಮುಂದಾಗಿದ್ದರು. ಆದರೆ, ಪತಿ ಸೋಮಶೇಖರ್ ಇದನ್ನು ವಿರೋಧಿಸಿದ್ದ. ಹಾಗಂತ ಅವನು ಒಳ್ಳೆಯ ಕಾರಣಕ್ಕಾಗಿ ಹೀಗೆ ಮಾಡಿದ್ದಲ್ಲ. ಅವನಿಗೆ ಇದ್ದದ್ದು ಎಲ್ಲ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶ ಎನ್ನಲಾಗಿದೆ. ಇದೀಗ ಪತ್ನಿಯನ್ನು ಕೊಂದಾದರೂ ಸರಿ ಭೂಮಿ ಮತ್ತು ಆಸ್ತಿಯನ್ನು ಕಬಳಿಸಲು ಮುಂದಾಗಿದ್ದಾನೆ.
ಸೋಮಶೇಖರ್ ಆಸ್ತಿ ವಿಚಾರದಲ್ಲಿ ಜಗಳ ಮಾಡುವುದು ಹೊಸತೇನಲ್ಲ. ಹಲವು ಬಾರಿ ರಾಜೀ ಪಂಚಾಯಿತಿ ನಡೆಸಿದ್ದರು ಕಿರುಕುಳ ಮುಂದುವರಿಸಿದ್ದ. ಹೀಗಾಗಿ ಆತನ ಮೇಲೆ ಎಲ್ಲರಿಗೂ ಸಂಶಯವಿತ್ತು. ಶ್ರುತಿ ಸಾವನ್ನಪ್ಪಿದ ಬಳಿಕ ಸಂಬಂಧಿಯೊಬ್ಬರು ಪತಿಯ ಮೇಲೆ ದೂರು ನೀಡಿದ್ದರು. ಯಾವ ಕಾರಣಕ್ಕೂ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಆರೋಪಿ ಕೊನೆಗೆ ಪೊಲೀಸ್ ಟ್ರೀಟ್ಮೆಂಟ್ಗೆ ಹೆದರಿ ಉಸಿರುಗಟ್ಟಿಸಿ ಕೊಂದಿರುವುದಾಗಿ ಒಪ್ಪಿದ್ದಾನೆ. ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.