Site icon PowerTV

ವೇಣುಗೋಪಾಲ್, ಸುರ್ಜೇವಾಲಾ ಮಾಸಿಕ ಕಲೆಕ್ಷನ್ ವಸೂಲಿಗೆ ಬಂದಿದ್ದಾರೆ : ಕೆ.ಎಸ್ ಈಶ್ವರಪ್ಪ

ಬೆಂಗಳೂರು : ದೆಹಲಿಯಿಂದ ಬಿಜೆಪಿ ಹೈಕಮಾಂಡ್ ಬುಲಾವ್ ವಿಚಾರ ಕುರಿತು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೊನ್ನೆ ನನಗೆ ದೆಹಲಿ ಕಚೇರಿಯಿಂದ ಕರೆ ಬಂತು. ಎರಡನೇ ತಾರೀಖು ಬರುವಂತೆ ತಿಳಿಸಿದ್ರು. ನಾನು, ಪಿ.ಸಿ ಮೋಹನ್, ಕೋಟ ಶ್ರೀನಿವಾಸ್ ಪೂಜಾರಿಗೆ ಬರಹೇಳಿದ್ದಾರೆ. ಯಾವ ವಿಚಾರಕ್ಕೆ ಬರ ಹೇಳಿದ್ದಾರೆ ಅಂತ ಗೊತ್ತಿಲ್ಲ. ಹೋದ ಮಲೆ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನ ಯಾವ ಆಂತರಿಕ ಸಂಘರ್ಷವೂ ಬಗೆಹರಿದಿಲ್ಲ. ಮಾಸಿಕ ಕಲೆಕ್ಷನ್ ಕೊಟ್ಟಿಲ್ಲ ಅಂತ ಕೆ.ಸಿ ವೇಣುಗೋಪಾಲ್, ಸುರ್ಜೇವಾಲಾ ಬಂದಿದ್ದಾರೆ. ಅವರು ಸಮಸ್ಯೆ ಬಗೆಹರಿಸಲು ಬಂದಿಲ್ಲ. ಪಂಚ ರಾಜ್ಯಗಳ ಚುನಾವಣೆ ಇದೆ, ಹಣ ಕೊಡ್ತೀವಿ ಅಂತ ಕೊಟ್ಟಿಲ್ಲ, ಕೊಡ್ರಪ್ಪ ಅಂತ ಬಂದಿದ್ದಾರೆ. ಆಪರೇಷನ್ ಕಮಲ ಬಗ್ಗೆ ಕಾಂಗ್ರೆಸ್ ಆರೋಪ ಸುಳ್ಳು. ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಕೊಡಲು ನಮಗೇನು ಗ್ರಹಚಾರ ಕೆಟ್ಟಿದೆಯಾ?ಎಂದು ಲೇವಡಿ ಮಾಡಿದ್ದಾರೆ.

ಗ್ಯಾರಂಟಿಗಳು ಸಂಪೂರ್ಣ ಬಿದ್ದು ಹಾಳಾಗಿವೆ

ಕಾಂಗ್ರೆಸ್‌ನಲ್ಲಿ ಎರಡು ಗುಂಪು ಇದೆ. ಬರ, ರೈತರ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ. ಮಾತೆತ್ತಿದರೆ ಕೇಂದ್ರ ಪರಿಹಾರ ಕೊಟ್ಟಿಲ್ಲ ಅಂತ ಹೇಳ್ತಾರೆ. ಬರೀ ಕೇಂದ್ರದ ಮೇಲೆ ಆರೋಪ ಮಾಡ್ತಿದ್ದಾರೆ. ಒಬ್ಬೇಒಬ್ಬ ಉಸ್ತುವಾರಿ ಸಚಿವ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಪರಿಹಾರ ಕೊಡೋದಿರಲಿ, ರೈತರಿಗೆ ಕನಿಷ್ಟ ಸಾಂತ್ವನ ಹೇಳಿಲ್ಲ. ಇಂಥ ಭೀಕರ ಬರಗಾಲ ಹಿಂದೆ ಬಂದಿಲ್ಲ. ಕಾಂಗ್ರೆಸ್ ನಾಯಕರು ಕುರ್ಚಿ ಕಚ್ಚಾಟದಲ್ಲಿ ತೊಡಗಿದ್ದಾರೆ. ಅವರ ಗ್ಯಾರಂಟಿಗಳು ವಿಫಲ ಆಗಿವೆ. ಗ್ಯಾರಂಟಿಗಳು ಸಂಪೂರ್ಣ ಬಿದ್ದು ಹಾಳಾಗಿವೆ ಎಂದು ಈಶ್ವರಪ್ಪ ವಾಗ್ದಾಳಿನಡೆಸಿದ್ದಾರೆ.

Exit mobile version