Site icon PowerTV

ಕುಡಿದ ಮತ್ತಿನಲ್ಲಿ ಡಯಾಲಿಸಿಸ್ : ಆಸ್ಪತ್ರೆ ಬೆಡ್ ಮೇಲೆಯೇ ಮಹಿಳೆ ಸಾವು

ವಿಜಯಪುರ : ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಕುಡಿದು ನಶೆಯಲ್ಲಿ ಡಯಾಲಿಸಿಸ್ ಮಾಡಿ ಮಹಿಳೆಯ ಪ್ರಾಣವನ್ನೇ ತೆಗೆದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಮಹಿಳೆ ಡಯಾಲಿಸಿಸ್ ವೇಳೆ ಆಸ್ಪತ್ರೆ ಬೆಡ್ ಮೇಲೆಯೇ ಮೃತಪಟ್ಟಿದ್ದಾಳೆ. ಆಸ್ಪತ್ರೆ ಎದುರು ಶವವಿಟ್ಟು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಟೈರ್​​ಗೆ ಬೆಂಕಿ ಹಚ್ಚಿ ಆಸ್ಪತ್ರೆ ಎದುರು ಪ್ರತಿಭಟನೆ ಮಾಡಿದ್ದಾರೆ.

ಬಿಸ್ಮಿಲ್ಲಾ ನದಾಫ್ ಸಾವನ್ನಪ್ಪಿದ ಮಹಿಳೆಯಾಗಿದ್ದು, ಪೋಷಕರು ಕಿಡ್ನಿ ಸಮಸ್ಯೆಯಿಂದ ಡಯಾಲಿಸಿಸ್​​ಗೆ ಬಿಸ್ಮಿಲ್ಲಾಳನ್ನ ಕರೆತಂದಿದ್ದರು. ಅವರು ಸರಿಯಾಗಿ ಡಯಾಲಿಸಿಸ್‌ ಕ್ರಮವನ್ನು ಪಾಲಿಸದ ಹಿನ್ನೆಲೆಯಲ್ಲಿ ರೋಗಿ ಬಿಸ್ಮಿಲ್ಲ ಸಾವನ್ನಪ್ಪಿದ್ದಾಳೆ ಎಂದು ಮೃತಳ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಆಸ್ಪತ್ರೆ ಎದುರು ಬಿಗುವಿನ ವಾತಾವರಣ

ಮಂಗಳವಾರವೇ ಡಯಾಲಿಸಿಸ್​​​ಗಾಗಿ ಬಿಸ್ಮಿಲ್ಲಾಳನ್ನು ಕರೆತರಲಾಗಿತ್ತು. ನಿನ್ನೆ ಡಯಾಲಿಸಿಸ್ ಮಾಡಲು ಬರ್ತಿನಿ‌ ಎಂದು ಹೇಳಿದ್ದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬಸವರಾಜ್ ಅಲ್ಲಿಂದ ಹೋಗಿದ್ದನು. ಇಂದು ಮಧ್ಯಾಹ್ನ 12 ಗಂಟೆಗೆ ಕುಡಿದು ನಶೆಯಲ್ಲಿಯೇ ಆಸ್ಪತ್ರೆಗೆ ಬಂದಿದ್ದಾನೆ. ನಂತರ, ನಶೆಯಲ್ಲಿಯೇ ಬಂದು ಡಯಾಲಿಸಿಸ್‌ ಮಾಡುವಾಗ ಯಡವಟ್ಟು ಮಾಡಿಕೊಂಡಿದ್ದಾನೆ. ಈ ಯಡವಟ್ಟಿನಿಂದ ಡಯಾಲಿಸಿದ್‌ ಪಡೆಯುತ್ತಿದ್ದ ಮಹಿಳೆ ಬಿಸ್ಮಿಲ್ಲಾ ಹಾಸಿಗೆ ಮೇಲೆಯೇ ಸಾವಿಗೀಡಾಗಿದ್ದಾಲೆ. ಈಗ ಇಂಡಿ ತಾಲ್ಲೂಕು ಆಸ್ಪತ್ರೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Exit mobile version