Site icon PowerTV

ಮನೆಗೆ ಮರಳಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಅದ್ಧೂರಿ ಸ್ವಾಗತ

ಬೆಂಗಳೂರು : ಆಂಧ್ರ ಪ್ರದೇಶದ ಕೌಶಲ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಇಂದು ಬೆಳಗ್ಗೆ ಉಂದವಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ಮರಳಿದ್ದಾರೆ.

ನಾಯ್ಡು ಅವರನ್ನು ಪತ್ನಿ ಭುವನೇಶ್ವರಿ ಮತ್ತು ಕುಟುಂಬಸ್ಥರು ಆರತಿ ಬೆಳಗಿ ಸ್ವಾಗತಿಸಿದರು. ಇದೇ ವೇಳೆ ಸಾವಿರಾರು ಕಾರ್ಯಕರ್ತರು ನಿವಾಸದ ಬಳಿ ಜಮಾಯಿಸಿದ್ದರು.

ಕೌಶಲ ಅಭಿವೃದ್ಧಿ ನಿಗಮದ 300 ಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ನಾಯ್ಡು ಅವರನ್ನು ಸೆಪ್ಟೆಂಬರ್​ 9ರಂದು ಬಂಧಿಸಲಾಗಿತ್ತು. ಅವರಿಗೆ ಹೈಕೋರ್ಟ್‌ ಮಂಗಳವಾರ ನಾಲ್ಕು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಅರ್ಜಿ ವಿಚಾರಣೆ ವೇಳೆ ನಾಯ್ಡು ಪರ ವಕೀಲರು, ನಾಯ್ಡು ಅವರು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿದೆ. ಆರೋಗ್ಯದ ದೃಷ್ಟಿಯಿಂದ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಚಂದ್ರಬಾಬು ನಾಯ್ಡು ಅವರಿಗೆ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಹಾಗೂ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸದಿರುವಂತೆ ಹೈಕೋರ್ಟ್ ಷರತ್ತು ವಿಧಿಸಿ, ಮಧ್ಯಂತರ ಜಾಮೀನು ನೀಡಿದೆ.

Exit mobile version