ಬಾಗಲಕೋಟೆ : ನಾನು ಬಿಜೆಪಿಗೆ ಬಂದ ಬಳಿಕವೇ ಸೋತಿದ್ದು ಎಂಬ ಮಾಜಿ ಸಚಿವ ವಿ. ಸೋಮಣ್ಣ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಅವರ ಅನುಭವ, ಅದು ಸತ್ಯ ಕೂಡ ಇದೆ. ಅದಕ್ಕೆ ಕಾರಣಗಳು ಬೇರೆ ಬೇರೆ ಇವೆ ಎಂದು ಹೇಳಿದ್ದಾರೆ.
ವಿ. ಸೋಮಣ್ಣ ಅವರ ಸೋಲಿಗೆ ಕ್ಷೇತ್ರ, ಕ್ಷೇತ್ರ ಬದಲಾವಣೆ ಹೀಗೆ ಕೆಲವು ಕಾರಣಗಳಿವೆ. ಅದೊಂದು ವಿಶೇಷ ಸಂದರ್ಭ ಬಿಟ್ಟರೆ, ನಮ್ಮ ತಾಲೂಕು ಹಾಗೂ ಜಿಲ್ಲಾ ಮಟ್ಟದ ಮುಖಂಡರು ಹೋದವರೆಲ್ಲಾ ಪಶ್ಚಾತ್ತಾಪ ಪಟ್ಟಿದ್ದಾರೆ. ಇವರೆಲ್ಲ ಬರುವಂತಹ ದಿನಗಳಲ್ಲಿ ಮತ್ತೆ ಬಿಜೆಪಿಯತ್ತ ಬರೋದು ನಿಶ್ಚಿತ ಎಂದು ತಿಳಿಸಿದ್ದಾರೆ.
ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ, ಮನಸ್ಸಿಲ್ಲ
ಬರ ಪರಿಹಾರ ವಿಚಾರ ಕುರಿತು ಮಾತನಾಡಿದ ಅವರು, ಆಗಲೇ ಕೇಂದ್ರ ಸರ್ಕಾರ ಮೊದಲ ಕಂತಿನ ಹಣ, ಎರಡು ತಿಂಗಳ ಹಿಂದೆಯೇ 350 ಕೋಟಿ ರಿಲೀಸ್ ಮಾಡಿದೆ. ಜಿಲ್ಲಾಧಿಕಾರಿಗಳ ಅಕೌಂಟ್ನಲ್ಲೂ ದುಡ್ಡಿದೆ. ಈಗ ಬರದಲ್ಲಿರೋರಿಗೆ ಕೊಟ್ಟರೇ ಮತ್ತೆ ಮುಂದೆ ಏನಾದ್ರೂ ಡಿಮ್ಯಾಂಡ್ ಮಾಡಿದ್ರೆ ಕಷ್ಟ ಅಂತ. ಗ್ಯಾರಂಟಿಗಳಿಗೆ ದುಡ್ಡು ಕೊಟ್ಟಿರೋದ್ರಿಂದ, ಮೀನಾಮೇಷ ನೋಡ್ತಿದ್ದಾರೆ.ಈ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲ, ಮನಸ್ಸಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.


