ಬಾಗಲಕೋಟೆ : ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯ ಇನ್ನು ಸ್ವಲ್ಪ ದಿನದಲ್ಲಿ ಸ್ಫೋಟವಾಗಲಿದೆ. ಜನರಿಗೆ ಅಭಿವೃದ್ಧಿ ಕೊಡೋರು ಯಾರೂ ಸಹ ಈ ಸರ್ಕಾರದಲ್ಲಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದರು.
ಮೂರು ಜನ ಡಿಸಿಎಂ ಚರ್ಚೆ ಬಗ್ಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಬುಡಕ್ಕೆ ಇವ್ರು, ಇವರ ಬುಡಕ್ಕೆ ಅವ್ರು ಇಡೋಕೆ ನೋಡ್ತಾರೆ. ಈ ಮಧ್ಯೆ ಶಾಸಕರು ನಮ್ಮ ಮಾತು ಕೇಳೋರಿಲ್ಲ, ಅಭಿವೃದ್ಧಿ ಇಲ್ಲ ಅಂತಿದ್ದಾರೆ. ಹೀಗಾಗಿ, ಈ ಸರ್ಕಾರ ಗೊಂದಲದ ಗೂಡಾಗಿದೆ ಎಂದು ಲೇವಡಿ ಮಾಡಿದರು.
ಈ ಸರ್ಕಾರದಲ್ಲಿ ಸಿಎಂ ನೇಮಕ ಪ್ರಕ್ರಿಯೆಯಿಂದಲೇ ಭಿನ್ನಾಭಿಪ್ರಾಯ ಶುರುವಾಗಿದೆ. ಸಿಎಂ ಆಯ್ಕೆ ವೇಳೆಯೇ ಸಿದ್ದರಾಮಯ್ಯ ದೆಹಲಿಯಿಂದ ಮರಳಿ ಬರ್ತಾ ಇದ್ರು. ಸಿದ್ದರಾಮಯ್ಯ ಕೋಪದಿಂದಲೇ ಹೊರಗೆ ಬರ್ತಾ ಇದ್ರು. ನನ್ನನ್ನ ಸಿಎಂ ಮಾಡಲ್ಲ ಅಂತ ಕೋಪಗೊಂಡಿದ್ರು. ನಂತರ ಸಿದ್ದರಾಮಯ್ಯಗೆ ಕರಾರು, ಖಂಡಿಷನ್ ಮೂಲಕ ಆಗಿಯೇ ಸಿಎಂ ಸ್ಥಾನ ನೀಡಿದ್ದು ಎಂದು ಚಾಟಿ ಬೀಸಿದರು.
5 ವರ್ಷ ನಾನೇ ಸಿಎಂ ಅಂತ ಹೇಳಿಲ್ಲ
ಸಿಎಂ ಆದ ಒಂದೇ ತಿಂಗಳಲ್ಲಿ ನಾಲ್ಕೈದು ಜನ ಸಚಿವ ಸಂಪುಟದ ಹಿರಿಯರು ಹೇಳಿದ್ರು. ಈ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಅಂದ್ರು. ಅವರೆಲ್ಲಾ ಸಂಶಯ ಬರುವ ರೀತಿಯಲ್ಲಿ ಹೇಳಲು ಶುರು ಮಾಡಿದ್ರು. ಈವರೆಗೂ ಸಿದ್ದರಾಮಯ್ಯ ಸಹ 5 ವರ್ಷ ನಾನೇ ಸಿಎಂ ಅಂತ ಎಲ್ಲೂ ಹೇಳಿಲ್ಲ. ಏನಿದರರ್ಥ? ಒಳಗಡೆ ಏನು ನಡೆದಿದೆ? ಇದು ರಾಜ್ಯದ ಜನತೆಗೆ ಗೊತ್ತಾಗಬೇಕು, ಇದು ಕಾಂಗ್ರೆಸ್ ಆಂತರಿಕ ವಿಷಯ ಅಲ್ಲ. ರಾಜ್ಯದ ಆಡಳಿತ ರಾಜ್ಯದ ಜನರಿಗೆ ಬೇಕಾದ ವಿಷಯ ಇದು ಎಂದು ಬೊಮ್ಮಾಯಿ ಹೇಳಿದರು.


